ಸೋಮವಾರಪೇಟೆ, ಸೆ.14 : ಕೊಲೆ ಪ್ರಕರಣವೊಂದರಲ್ಲಿ ಮೂರು ವರ್ಷಗಳ ಕಾಲ ನ್ಯಾಯಾಂಗ ಬಂಧನ ದಲ್ಲಿದ್ದು, ಇತ್ತೀಚೆಗಷ್ಟೇ ಹೊರಬಂದಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರೆಯೂರು ಗ್ರಾಮದಲ್ಲಿ ನಡೆದಿದೆ.(ಮೊದಲ ಪುಟದಿಂದ) ತನ್ನ ಪತ್ನಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕೆಲ ತಿಂಗಳ ಹಿಂದೆ ನ್ಯಾಯಾಂಗ ಬಂಧನ ಮುಗಿಸಿ ಹೊರಬಂದಿದ್ದ ಅರೆಯೂರು ಗ್ರಾಮದ ನಿವಾಸಿ ಎಂ.ಗಣಪತಿ (58) ಆತ್ಮಹತ್ಯೆಗೆ ಶರಣಾದವರು. ಕಳೆದ ಮೂರು ವರ್ಷಗಳ ಹಿಂದೆ ಪತ್ನಿ ಚಂದ್ರಮತಿಯ ಕೊಲೆ ಸಂಬಂಧ ಆರೋಪಿಯಾಗಿದ್ದು, ಮೂರು ವರ್ಷ ನ್ಯಾಯಾಂಗ ಬಂಧನದಲ್ಲಿದ್ದರು. ಇತ್ತೀಚೆಗೆ ಮಡಿಕೇರಿ ನ್ಯಾಯಾಲಯದಲ್ಲಿ ವಿಚಾರಣೆ ಮುಗಿದು ಗಣಪತಿ ಯವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿಯ ಮನೆಯವರು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ಗಣಪತಿ ಯವರಿಗೆ ನೋಟಿಸ್ ಜಾರಿಯಾಗಿತ್ತು.

ನೋಟೀಸ್‍ನಿಂದ ಮನನೊಂದು ಇನ್ನೂ ಶಿಕ್ಷೆ ಅನುಭವಿಸಬೇಕೆಂಬ ಭಯದಿಂದ ಗಣಪತಿ ಅರೆಯೂರಿನಲ್ಲಿರುವ ಶ್ರೀಕಾಂತ್ ಎಂಬವರಿಗೆ ಸೇರಿದ ತೋಟದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.