ಮಡಿಕೇರಿ, ಸೆ. 15: ಮಡಿಕೇರಿ ನಗರ ದಸರಾ ಸಮಿತಿ ಮತ್ತು ದಸರಾ ಕ್ರೀಡಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ತಾ. 23, 24 ಹಾಗೂ 26 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾ ಸಮಿತಿಯ ಅಧ್ಯಕ್ಷ ಬಿ.ಕೆ. ಜಗದೀಶ್, ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ತಾ. 23 ರಂದು ಬೆಳಿಗ್ಗೆ 6.30 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಮೆರಥಾನ್ ಆರಂಭಗೊಳ್ಳಲಿದೆ. ಪುರುಷರಿಗಾಗಿ ಕ್ಯಾಪಿಟಲ್ ವಿಲೇಜ್‍ವರೆಗೆ ತೆರಳಿ ಮರಳುವ 10 ಕಿ.ಮೀ. ಸ್ಪರ್ಧೆ ಹಾಗೂ ಮಹಿಳೆಯರಿಗೆ ನೀರುಕೊಲ್ಲಿಯವರೆಗೆ ತೆರಳಿ ಜ| ತಿಮ್ಮಯ್ಯ ವೃತ್ತಕ್ಕೆ ಮರಳುವ 5 ಕಿ.ಮೀ. ಸ್ಪರ್ಧೆ ನಡೆಯಲಿದೆ. 1 ರಿಂದ 3ನೇ ತರಗತಿ ಬಾಲಕ ಬಾಲಕಿಯರಿಗಾಗಿ 1 ಕಿ.ಮೀ., 4 ರಿಂದ 5ನೇ ತರಗತಿಗೆ 1.5 ಕಿ.ಮೀ., 6 ರಿಂದ 7ನೇ ತರಗತಿ 2 ಕಿ.ಮೀ., 8 ರಿಂದ 10ನೇ ತರಗತಿ 5 ಕಿ.ಮೀ. ಕ್ರಮಿಸುವ ಮೆರಥಾನ್ ನಡೆಯಲಿದೆ. ಮೆರಥಾನ್ ಸ್ಪರ್ಧೆಗೆ ಡಿವೈಎಸ್‍ಪಿ ಸುಂದರರಾಜ್ ಚಾಲನೆ ನೀಡಲಿದ್ದಾರೆ.

ತಾ. 24 ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯನ್ನು ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಕ್ರೀಡಾ ಜ್ಯೋತಿಯನ್ನು ಬರಮಾಡಿ ಕೊಳ್ಳಲಿದ್ದಾರೆ. 6 ವರ್ಷದ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವದು ಮತ್ತು ಕಪ್ಪೆ ಜಿಗಿತ, 1 ರಿಂದ 3ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 50 ಮೀ., 75 ಮೀ. ಓಟ, 4ರಿಂದ 5ನೇ ತರಗತಿ 50 ಮೀ., 75 ಮೀ., 6 ರಿಂದ 7ನೇ ತರಗತಿ 100 ಮೀ., 200 ಮೀ. ಓಟ, 8 ರಿಂದ 10 ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 100 ಮೀ., 400 ಮೀ. ಓಟದ ಸ್ಪರ್ಧೆ ನಡೆಯಲಿದೆ.

10ನೇ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ನಿಧಾನ ಗತಿಯ ಸೈಕಲ್ ಸ್ಪರ್ಧೆ, ಸಾಮಾನ್ಯ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆಯರಿಗೆ 100 ಮೀ., 400 ಮೀ. ಓಟದ ಸ್ಪರ್ಧೆ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಮುಕ್ತ ಥ್ರೋಬಾಲ್ ಮತ್ತು ಪುರುಷರಿಗೆ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಸ್ಥಳದಲ್ಲಿಯೇ ತಂಡಗಳನ್ನು ನೋಂದಾವಣಿ ಮಾಡಿಕೊಳ್ಳಲಾಗುವದು.

ವಿಶೇಷ ಸ್ಪರ್ಧೆಗಳು

ಇದೇ ಮೊದಲ ಬಾರಿಗೆ ಈಜು ಸ್ಪರ್ಧೆಯನ್ನು ಆಯೋಜಿಸ ಲಾಗುತ್ತಿದ್ದು, ಪುರುಷರು ಮತ್ತು ಮಹಿಳೆಯರಿಗಾಗಿ ಫ್ರೀ ಸ್ಟ್ರೋಕ್, ಬ್ಯಾಕ್ ಸ್ಟ್ರೋಕ್ 50 ಮೀ. ಮತ್ತು 100 ಮೀ. ಈಜು ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 50 ಮೀ. ಈಜು ಸ್ಪರ್ಧೆ ನಡೆಯಲಿದೆ. ಹಿರಿಯ ನಾಗರಿಕರಿಗೆ 100 ಮೀ. ನಡಿಗೆ. ಸಾಮಾನ್ಯ ವಿಭಾಗದಲ್ಲಿ ನಿಧಾನ ಮೋಟಾರ್ ಸೈಕಲ್ ರೇಸ್, ಪತ್ರಕರ್ತರಿಗೆ 100 ಮೀ. ಓಟ, ಭಾರದ ಗುಂಡು ಎಸೆತ, ಟೇಬಲ್ ಟೆನ್ನಿಸ್, ಚೆಸ್ ಕೇರಂ ಸ್ಪರ್ಧೆಗಳು ನಡೆಯಲಿವೆ.

ನಗರಸಭಾ ಸದಸ್ಯರಿಗೆ ಹಾಗೂ ದಸರಾ ಸಮಿತಿ ಸದಸ್ಯರಿಗೆ 100 ಮೀ. ಓಟ, ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿದೆ. ನಗರಸಭಾ ನೌಕರರಿಗೆ 100 ಮೀ. ಓಟ ಮತ್ತು ಭಾರದ ಗುಂಡು ಎಸೆತ, ಸಾಮಾನ್ಯ ವಿಭಾಗದಲ್ಲಿ ಪÀÅರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗಜಗ್ಗಾಟ, ಸಾರ್ವಜಿಕ ಮಹಿಳೆಯರಿಗೆ ಬಾಂಬ್ ಇನ್ ದಿ ಸಿಟಿ ಸ್ಪರ್ಧೆಗಳು ನಡೆಯಲಿವೆ.

ಆಸಕ್ತ ಸ್ಪರ್ಧಿಗಳು ಜಿಲ್ಲಾ ಕ್ರಿಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯ ಒಳಗೆ ಹೆಸರನ್ನು ನೋಂದಾಯಿಸಿ ಕೊಳ್ಳಬೇಕೆಂದು ಬಿ.ಕೆ. ಜಗÀದೀಶ್ ತಿಳಿಸಿದರು. ಉದ್ಘಾಟನಾ ಸಮಾರಂಭ ದಲ್ಲಿ ಅಂತರ್ರಾಷ್ಟ್ರೀಯ ಓಟಗಾರ ಕೊಡಗಿನ ತಿಲಕ್ ಅವರನ್ನು ಸನ್ಮಾನಿಸಲಾಗುವದೆಂದು ತಿಳಿಸಿದರು.

ತೆಂಗಿನಕಾಯಿಗೆ ಗುಂಡು

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಕುರಿತು ಸಮಿತಿಯ ಪದಾಧಿಕಾರಿ ಪೊನ್ನಚ್ಚನ ಮಧು ಮಾಹಿತಿ ನೀಡಿದರು.

ತಾ. 24 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಶ್ರೀ ರಾಜೇಶ್ವರಿ ಶಾಲಾ ಮೈದಾನದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಾಳುಗಳು .22 ಬಂದೂಕು ಮತ್ತು ಮದ್ದುಗುಂಡುಗಳನ್ನು ತರಬೇಕೆಂದು ಹೇಳಿದÀರು.

ಕಬಡ್ಡಿ ಆಕರ್ಷಣೆ

ತಾ. 26 ರಂದು ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ತಂಡದಲ್ಲಿ ಮೂರು ಜನ ಅತಿಥಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕಪಿಲ್ ತಿಳಿಸಿದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಹೇಳಿದರು. ತಾ.25 ರ ಸಂಜೆ 5 ಗಂಟೆಯ ಒಳಗೆ ಆಸಕ್ತ ತಂಡಗಳು ಪ್ರವೇಶ ಶುಲ್ಕ 700 ರೂ,.ಗಳೊಂದಿಗೆ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9448206688, 9731009841, 9945258604 ನ್ನು ಸಂಪರ್ಕಿಸಬಹುದಾಗಿದೆ. ಕಳೆದ ವರ್ಷ 25 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ ಇನ್ನೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ ಎಂದು ಕಪಿಲ್ ತಿಳಿಸಿದರು. ವಿಜೇತ ಕಬಡ್ಡಿ ತಂಡಗಳಿಗೆ ಪ್ರಥಮ ಬಹುಮಾನ 12 ಸಾವಿರ, ದ್ವಿತೀಯ 8 ಸಾವಿರ, ತೃತೀಯ 3 ಸಾವಿರ, ನಾಲ್ಕನೇ ಬಹುಮಾನ 2 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗು ವದೆಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಎಂ. ಹರೀಶ್, ದೀಪಕ್ ಕಣ್ಣನ್ ಹಾಗೂ ಕಾರ್ಯದರ್ಶಿ ಕೆ.ಎಸ್. ರಾಕೇಶ್ ಉಪಸ್ಥಿತರಿದ್ದರು.