ಮಡಿಕೇರಿ, ಸೆ. 8: ಮರಗೋಡು ನಿವಾಸಿ ಹಾಗೂ ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಚೆರಿಯಮನೆ ಕೆ. ಶಶಿಧರ್ ಅವರು, ಇಂದು ಬೆಳಗಿನ ಜಾವ 4.15ರ ಸುಮಾರಿಗೆ ತಮ್ಮ ಮನೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹನ್ನೊಂದು ತಿಂಗಳ ಹಿಂದೆ ತಮ್ಮ ಪತ್ನಿಯ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿದ್ದ ಇವರು ಮಾನಸಿಕವಾಗಿ ತೀವ್ರ ವೇದನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಮೃತರ ಸೋದರ ಸಿ.ಕೆ. ವೇಣುಗೋಪಾಲ್ ಪೊಲೀಸ್ ಪುಕಾರಿನಲ್ಲಿ ತಿಳಿಸಿದ್ದಾರೆ.ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಪೊಲೀಸ್ ಗೌರವ ಸಲ್ಲಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಮೃತ ಸಿ.ಕೆ. ಶಶಿಧರ್ ಅಗಲಿಕೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿ ಬೋಜಪ್ಪ ಅವರುಗಳು ಗೌರವನಮನ ಸಲ್ಲಿಸಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಜಿಲ್ಲೆಯ ನಾಪೋಕ್ಲು, ಸುಂಟಿಕೊಪ್ಪ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದ ಶಶಿಧರ್, ಮಡಿಕೇರಿ ಲೋಕಾಯುಕ್ತದಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಮೃತರು ಮೂವರು ಪುತ್ರಿಯರಾದ ಸಿಂಧೂರ, ಸಿಂಚನ ಹಾಗೂ ಸಿತಾರ ಸೇರಿದಂತೆ ಬಂಧುವರ್ಗವನ್ನು ಅಗಲಿದ್ದಾರೆ.