ಮಡಿಕೇರಿ, ಆ.23 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗೌರಿ-ಗಣೇಶ ಚತುರ್ಥಿಗೆ ಪೂರ್ವಭಾವಿಯಾಗಿ ‘ಪರಿಸರ ಸ್ನೇಹಿ ಗಣೇಶ ಬಳಕೆಗಾಗಿ ಗಣೇಶ ಉತ್ಸವ’ ಕುರಿತಂತೆ ಪರಿಸರ ಜಾಗೃತಿ ಆಂದೋಲನವು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ನಡೆಯಿತು.

ಶಾಲೆಯಲ್ಲಿ ‘ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ’ ಅಂಗವಾಗಿ ಮಕ್ಕಳಿಗೆ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಏರ್ಪಡಿಸಲಾಗಿತ್ತು. ಶಾಲೆಯ ಮಕ್ಕಳು ತುಂಬ ಖುಷಿಯಿಂದ ಜೇಡಿಮಣ್ಣಿನಿಂದ ತಯಾರಿಸಿದ್ದ ವಿವಿಧ ನಮೂನೆಯ ಗಣೇಶ ಮಣ್ಣಿನ ಮೂರ್ತಿಗಳು ಜನರ ಗಮನ ಸೆಳೆದವು.

‘ಹಸಿರೆಡೆಗೆ ನಡೆ-ಗ್ರೋ ಗ್ರೀನ್, ಗ್ರೀನ್ ಯಾತ್ರಾ’ ಹಾಗೂ ‘ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ’ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಕೊಡಗಿನಲ್ಲಿ ‘ಪರಿಸರಸ್ನೇಹಿ ಮಣ್ಣಿನ ಗಣೇಶ ವಿಗ್ರಹ ಸ್ಥಾಪಿಸೋಣ-ಜಲಮೂಲಗಳನ್ನು ಉಳಿಸೋಣ’ ಎಂಬ ಘೋಷಣೆಯಡಿ ನೈಸರ್ಗಿಕವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಬಳಕೆ ಮಾಡುವ ಉದ್ದೇಶದಿಂದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

‘ಪರಿಸರ ಸ್ನೇಹಿ ಗಣೇಶೋತ್ಸವ’ದ ಕುರಿತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಮಾತನಾಡಿ, ಪಿ.ಓ.ಪಿ., ಸೀಸದಂತಹ ವಿಷಕಾರಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶಮೂರ್ತಿಗಳನ್ನು ಬಳಸದೇ ಮಣ್ಣಿನ ಗಣೇಶಮೂರ್ತಿ ಮಾತ್ರ ಬಳಕೆ ಮಾಡುವ ಮೂಲಕ ಮಾಲಿನ್ಯ ಮುಕ್ತ ನದಿ, ಕೆರೆ, ಬಾವಿ ಮತ್ತಿತರ ಜಲಮೂಲ ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ‘ಗಣೇಶ ಚತುರ್ಥಿಯನ್ನು ಶಬ್ದ, ವಾಯು ಹಾಗೂ ಜಲ ಮಾಲಿನ್ಯ ರಹಿತವಾಗಿ ಆಚರಿಸಲು ದೃಢ ಸಂಕಲ್ಪ ತೊಡಬೇಕು’ ಎಂದರು. ಕೊಡಗಿನಲ್ಲಿ ಹಮ್ಮಿಕೊಂಡಿರುವ ಪರಿಸರ ಸ್ನೇಹಿ ಗಣೇಶೋತ್ಸವವು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಸೀಸ, ಪಾದರಸ ಲೇಪಿತ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿ.ಓ.ಪಿ.) ಗಣಪತಿ ಮೂರ್ತಿಗಳನ್ನು ಬಳಸದೇ, ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ‘ಪರಿಸರ ಸ್ನೇಹಿ’ ಗಣೇಶ ವಿಗ್ರಹಗಳನ್ನು ಖರೀದಿಸಬೇಕು ಎಂದು ಮನವಿ ಮಾಡಲಾಗುತ್ತಿದೆ ಎಂದು ಫಿಲಿಪ್‍ವಾಸ್ ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಬಿ.ಶಿವರಾಂ ಶಿವಳ್ಳಿ ಅವರು ಇಂತಹ ಪರಿಸರ ಜಾಗೃತಿ ಅಭಿಯಾನಗಳು ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿವೆ ಎಂದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಗೌರವ ಕೋಶಾಧಿಕಾರಿ ಎಸ್.ಎಚ್.ಈಶ, ಸಮಿತಿ ಸದಸ್ಯೆ ಡಿ.ಎಂ.ರೇವತಿ, ಕುಶಾಲನಗರ ಜೆಸಿಐ ಕಾವೇರಿ ಸಂಸ್ಥೆಯ ಅಧ್ಯಕ್ಷ ನಂದೀಶ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ನಂತರ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಕುರಿತಂತೆ ಪರಿಸರ ಘೋಷಣೆಗಳನ್ನು ಒಳಗೊಂಡ ಭಿತ್ತಿಫಲಕಗಳನ್ನು ಪರಿಸರ ಘೋಷಣೆ ಕೂಗಿ ಗಮನ ಸೆಳೆದರು.