ಮಡಿಕೇರಿ, ಮೇ, 16: ನಗರದ ಜಿಲ್ಲಾಡಳಿತ ಭವನ ಮತ್ತು ಸಂತ ಮೈಕಲರ ಶಾಲೆಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸುಗಮ ಓಡಾಟಕ್ಕೆ ಅನುಕೂಲವಾಗಲು ಮೇಲು ಸೇತುವೆ ಅಥವಾ ಸುರಂಗ ಮಾರ್ಗ ನಿರ್ಮಾಣ ಮಾಡಲು ಅಗತ್ಯ ಪ್ರಸ್ತಾವನೆ ಕಳುಹಿಸಿಕೊಡುವಂತೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಮಡಿಕೇರಿ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಜನದಟ್ಟಣೆ ಹಾಗೂ ವಾಹನ ದಟ್ಟಣೆಯಿಂದ ಕೂಡಿದೆ. ಹಾಗೆಯೇ ಸಾರ್ವಜನಿಕರು ಜಿಲ್ಲಾಡಳಿತ ಭವನಕ್ಕೆ ಹಾಗೂ ಸಂತ ಮೈಕಲರ ಶಾಲೆಗೆ ವಿದ್ಯಾರ್ಥಿಗಳು ಸುಗಮವಾಗಿ ಓಡಾಡಲು ಮೇಲುಸೇತುವೆ ಅಥವಾ ಸುರಂಗ ಮಾರ್ಗದ ಅಗತ್ಯವಿದೆ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಸಿ. ದೇವಯ್ಯ ಸಚಿವರಲ್ಲಿ ಮನವಿ ಮಾಡಿದರು.

ನಗರದ ಕನ್ನಂಡಬಾಣೆಯ ಕೆರೆ ದುರಸ್ತಿಗಾಗಿ ಅನುದಾನ ಬಿಡುಗಡೆ ಮಾಡಲಾಗುವದು. ಒಳಚರಂಡಿ ನೀರು ಒಂದೆಡೆ ಸೇರುವಂತಾಗಲು ಅವಶ್ಯವಿರುವ ಭೂಮಿಯನ್ನು ಜಿಲ್ಲಾಧಿಕಾರಿಯವರಿಂದ ಪಡೆಯುವಂತೆ ಪ್ರಾಧಿಕಾರದ ಆಯುಕ್ತರಿಗೆ ಸಚಿವರು ನಿರ್ದೇಶನ ನೀಡಿದರು.

ನಗರಕ್ಕೆ ಅಲಂಕೃತ ವಿದ್ಯುತ್ ದೀಪ ಮತ್ತು ಎಲ್.ಇ.ಡಿ.ಗಳನ್ನು ಅಳವಡಿಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಸಿ. ದೇವಯ್ಯ ಮಡಿಕೇರಿ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಪೌರಾಯುಕ್ತೆ ಬಿ. ಶುಭ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.

ನಗರಸಭಾ ವ್ಯಾಪ್ತಿಯಲ್ಲಿ ಬರುವ ಶುದ್ದ ಜಲಮೂಲ ಘಟಕಗಳಾದ ಕೆರೆ ಮತ್ತು ತೆರೆದ ಬಾವಿಗಳನ್ನು ಅಭಿವೃದ್ಧಿಪಡಿಸಿ ಮಡಿಕೇರಿ ನಗರದ ನಾಗರಿಕರಿಗೆ, ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಹಾಗೂ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಸೀಟ್ ಉದ್ಯಾನದವರೆಗೂ ಮತ್ತು ಈ ವೃತ್ತದಿಂದ ಖಾಸಗಿ ಬಸ್ ನಿಲ್ದಾಣದ ವೃತ್ತದವರೆಗೆ ಪ್ರಾಧಿಕಾರದ ವತಿಯಿಂದ ಅಲಂಕಾರಿಕ ವಿದ್ಯುತ್ ಕಂಬ ಹಾಕಿ ಲ್ಯಾಂಪ್‍ಗಳನ್ನು ಅಳವಡಿಸುವ ಯೋಜನೆ, ರಾಜಸೀಟ್-ವ್ಯಾಲಿವ್ಯೂ ಸಮೀಪ ಇರುವ ನೆಹರು ಮಂಟಪದ ದುರಸ್ತಿ ಮತ್ತು ಅದರ ಸುತ್ತಲಿನ ಖಾಲಿ ಇರುವ ಪ್ರದೇಶಕ್ಕೆ ಹುಲ್ಲು ಹಾಸು ಹಾಸಿ, ಕಲ್ಲಿನ ಬೆಂಚುಗಳನ್ನು ಅಳವಡಿಸುವ ಯೋಜನೆ ಬಗ್ಗೆ ಎ.ಸಿ. ದೇವಯ್ಯ ಅವರು ಸಚಿವರಲ್ಲಿ ಮನವಿ ಮಾಡಿದರು.