ಸುಂಟಿಕೊಪ್ಪ, ಏ. 18: ಕೊಡಗರಹಳ್ಳಿ ಗ್ರಾಮದ ಅಂದಗೋವೆ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹೋತ್ಸವವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶ್ರೀ ಭಗವತಿ ದೇವಾಲಯದಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ವಾರ್ಷಿಕೋತ್ಸವದಲ್ಲಿ ಗ್ರಾಮದ ಜನತೆಯು ತಳಿರುತೋರಣಗಳಿಂದ ದೇವಾಲಯವನ್ನು ಸಿಂಗರಿಸುವ ಮೂಲಕ ಗ್ರಾಮದಲ್ಲಿ ನೆಲೆಸಿರುವ 7 ಕೊಡವ ಕುಟುಂಬಗಳಾದ ಮೊಳ್ಳೇರ, ನಾಗಚÉಟ್ಟಿರ, ದಾಸಂಡ, ಚಿಕ್ಕಂಡ, ಕೇಚಿರ, ಮೂಡಂಡ, ದೊಡ್ಡ ನಾಗಚೆಟ್ಟಿರ ವ್ರತಾಚರಣೆಯಲ್ಲಿ ನಡೆಸುವ ಮೂಲಕ ಕೊನೆಯದಿನ ಕೊಡವ ಬಿಳಿ ಉಡುಪಿನೊಂದಿಗೆ ದೇವಾಲಯಕ್ಕೆ ಆಗಮಿಸಿ ಚಿಕ್ಕಂಡ ಮನೆಯಿಂದ ಭಂಡಾರವನ್ನು ದೇವಾಯಲಕ್ಕೆ ಕಾಲ್ನಡಿಗೆಯಲ್ಲಿ ಹೊತ್ತು ದೇವಸ್ಥಾನಕ್ಕೆ ಅರ್ಪಿಸಿ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಯಿತು. ದೇವಿಯ ಮಹಾಪೂಜೆಯಲ್ಲಿ ಪಾಲ್ಗೊಳ್ಳುವ ಕುಟುಂಬಗಳು ದೇವಸ್ಥಾನದಲ್ಲಿ ಬೊಳಕಾಟ್ (ಬೆಳಕಿನ ಆಟ) ಕುಣಿತವನ್ನು ನಡೆಸಿದರು. ನಂತರ ದೇವಸ್ಥಾನದ ಕೋವಿಗಳಿಗೆ ಪೂಜೆ ಸಲ್ಲಿಸಿ ಆವರಣದಲ್ಲಿ ಮರದ ತುದಿಯಲ್ಲಿ ಕಟ್ಟಲಾದ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆ ಹಾಗೂ ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆಗಳನ್ನು ನಡೆಸಲಾಯಿತು. ಭಕ್ತಾದಿಗಳಿಗೆ ಮಹಾಪೂಜೆಯೊಂದಿಗೆ ಲಘು ಉಪಹಾರವನ್ನು ವಿತರಿಸಲಾಯಿತು.
ಪೂಜಾ ಕೈಂಕರ್ಯಗಳನ್ನು ಕೃಷ್ಣ ಉಪಾಧ್ಯಾಯ, ಗಣೇಶ ಉಪಾಧ್ಯಾಯ, ನರಸಿಂಹ ಉಪಾಧ್ಯಾಯ, ಶಂಕರ ತಂತ್ರಿ, ರಂಗತ್ತಯ್ಯ ವೇದಮೂರ್ತಿಗಳು ನಡೆಸಿದರು. ಸಮಿತಿಯ ಅಧ್ಯಕ್ಷ ಮೊಳ್ಳೇರ ಡಾಲು ಕಾವೇರಪ್ಪ, ಉಪಾಧ್ಯಕ್ಷ ಚಿಕ್ಕಂಡ ಉತ್ತಯ್ಯ, ಪ್ರಧಾನ ಕಾರ್ಯದರ್ಶಿ ನಾಗಚೆಟ್ಟಿರ ಕ್ಲೈವ ಪೊನ್ನಪ್ಪ, ಖಜಾಂಚಿ ಕೆಚ್ಚಿರ ಚಂಗಪ್ಪ, ಚಿಕ್ಕಂಡ ಉತ್ತಪ್ಪ, ನಾಗಚೆಟ್ಟಿರ ತಿಮ್ಮಯ್ಯ, ಹಿರಿಯರು, ಸಮಿತಿ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.