ಕುಶಾಲನಗರ, ಏ. 18: ಹಾರಂಗಿ ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಲು ಸ್ಪೋಟಕಗಳನ್ನು ಬಳಸುವದರೊಂದಿಗೆ ಅಪಾಯಕಾರಿ ಘಟನೆಗಳು ನಡೆಯುತ್ತಿರುವದು ವರದಿಯಾಗಿದೆ. ಹಾರಂಗಿ ಅಣೆಕಟ್ಟು ಕೆಳಭಾಗದಲ್ಲಿ ಕೆಲವು ಸ್ಥಳೀಯರು ಸ್ಪೋಟಕಗಳನ್ನು ಬಳಸಿ ಮೀನುಗಾರಿಕೆ ಮಾಡುತ್ತಿದ್ದು ಈ ಮೂಲಕ ಅಪಾಯಕಾರಿ ಸ್ಪೋಟಕದಿಂದ ವ್ಯಕ್ತಿಯೊಬ್ಬನ ಕೈ ಛಿದ್ರವಾದ ಘಟನೆ ನಡೆದಿದೆ.

ಸ್ಥಳೀಯ ಬಾಬು ಎಂಬಾತ ನದಿಯಲ್ಲಿ ಸ್ಪೋಟಕ ಸಿಡಿಸುವ ಸಂದರ್ಭ ಘಟನೆ ನಡೆದಿದ್ದು ಆತನ ಬಲಗೈ ಛಿದ್ರಗೊಂಡಿದ್ದು ಚಿಕಿತ್ಸೆಗೆ ಮೈಸೂರಿಗೆ ದಾಖಲಾಗಿರುವದಾಗಿ ತಿಳಿದುಬಂದಿದೆ. ಹಾರಂಗಿ ನದಿಯ ಕೆಳಭಾಗದ 5 ಕಿಮೀ ಉದ್ದ ವ್ಯಾಪ್ತಿಯಲ್ಲಿ ಮಹಶೀರ್ ಮೀನು ಅಭಿವೃದ್ಧಿ ಯೋಜನೆ ನಡೆಯುತ್ತಿದ್ದು ಯಾವದೇ ರೀತಿಯ ಮೀನುಗಾರಿಕೆ ನಡೆಸುವದು ನಿಷಿದ್ಧವಾಗಿದ್ದರೂ ಅಕ್ರಮಗಳು ಮುಂದುವರೆದಿದೆ. ಸಂಬಂಧಿಸಿದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವದು ಸಂಶಯಕ್ಕೆ ಎಡೆ ಮಾಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ವರ್ಷ ವ್ಯಕ್ತಿಯೊಬ್ಬ ಸ್ಪೋಟಕ ಬಳಸಿ ಮೀನು ಹಿಡಿಯುವ ಸಂದರ್ಭ ಸ್ಪೋಟಗೊಂಡು ಕೈ ಕಳೆದುಕೊಂಡಿರುವದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ವಿಶೇಷ ತಳಿಯಾದ ಮಹಶೀರ್ ಮೀನಿನ ಮರಿಗಳನ್ನು ನದಿಯಲ್ಲಿ ಅಭಿವೃದ್ಧಿಗೊಳಿಸುತ್ತಿರುವ ಮೀನುಗಾರಿಕಾ ಇಲಾಖೆ ಎಚ್ಚರಿಕೆ ಫಲಕ ಅಳವಡಿಸಿದ್ದರ ಹೊರತಾಗಿ ಯಾವದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರುಗಳು ಕೇಳಿಬಂದಿವೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡು ಅಪರೂಪದ ಮಹಶೀರ್ ತಳಿಯನ್ನು ಸಂರಕ್ಷಣೆ ಮಾಡುವದರೊಂದಿಗೆ ಮುಗ್ಧ ಜನರು ಸ್ಪೋಟಕಗಳಿಗೆ ಬಲಿಯಾಗುವದಕ್ಕೆ ಕಡಿವಾಣ ಹಾಕಬೇಕಿದೆ.