ಮಡಿಕೇರಿ, ಏ. 19: ಹೆಣ್ಣು ಮಕ್ಕಳ ಸ್ಥಾನವನ್ನು ಕುಟುಂಬ ಹಾಗೂ ಸಮುದಾಯದಲ್ಲಿ ಹೆಚ್ಚಿಸಲು, ಪೋಷಣೆ ಮತ್ತು ಶಿಕ್ಷಣದ ಉತ್ತೇಜನಕ್ಕಾಗಿ 2006-17ನೇ ಸಾಲಿನಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಆದೇಶದನ್ವಯ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಎರಡು ಹೆಣ್ಣು ಮಕ್ಕಳು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬದಲ್ಲಿನ ಮಕ್ಕಳ ಸಂಖ್ಯೆ ಎರಡನ್ನು ಮೀರಿರಬಾರದು. ಅರ್ಹ ಫಲಾನುಭವಿಗಳ ಪೋಷಕರು ಮಗುವಿನ ಹೆಸರನ್ನು ಮಗು ಜನಿಸಿದ 6 ತಿಂಗಳೊಳಗಾಗಿ ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಮಹಿಳಾ ಮೇಲ್ವಿಚಾರಕಿಯರ ಪರಿಶೀಲನೆಯೊಂದಿಗೆ ಆಯಾಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ದಿನಾಂಕ 1.4.2006 ರಿಂದ 31.7.2008ರವರೆಗೆ ಜನಿಸಿ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ಪಡೆದ ಮಕ್ಕಳು ಶಾಲಾ ದಾಖಲಾತಿಯ ನಂತರ 1 ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಇಂತಹ ಫಲಾನುಭವಿಗಳ ಪೋಷಕರು ಮಕ್ಕಳ ಶಾಲಾ ವ್ಯಾಸಂಗ ದೃಢೀಕರಣ ಪತ್ರ ಮತ್ತು ತಾಯಿ ಮಗುವಿನ ಜಂಟಿ ಖಾತೆಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಅಥವಾ ಆಯಾಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಒದಗಿಸಿ ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.

ಭಾಗ್ಯಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಗಳನ್ನು ಸರ್ಕಾರಿ ಶಾಲೆಗಳಲ್ಲದೆ ಖಾಸಗಿ, ಅರೆ ಸರ್ಕಾರಿ, ಕೇಂದ್ರೀಯ ಹಾಗೂ ಇತರ ಶಾಲೆಗಳಲ್ಲಿ ದಾಖಲಿಸಿ ಶಿಕ್ಷಣ ಪಡೆಯುವ ಅವಕಾಶವಿದೆ ಎಂಬ ಅಂಶವನ್ನು ಎಲ್ಲಾ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಪೋಷಕರ ಗಮನಕ್ಕೆ ತರಲಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ತಿಳಿಸಿದ್ದಾರೆ.