ಮಡಿಕೇರಿ, ಏ.19 : ನಗರಸಭೆ ವತಿಯಿಂದ ಬಡತನ ನಿರ್ಮಾಲನಾ ಕಾರ್ಯಕ್ರಮದಡಿ 2016-17 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅರ್ಹರಿಗೆ ಸರ್ಕಾರದ ನಿರ್ದೇಶನದಂತೆ ಸಹಾಯಧನ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ತಿಳಿಸಿದ್ದಾರೆ.

ನಗರದ ನಗರಸಭೆಯ ತಮ್ಮ ಕಚೇರಿ ಸಭಾಂಗಣದಲ್ಲಿ ಅರ್ಹರಿಗೆ ವಿಮಾ ಮೊತ್ತದ ಚೆಕ್ ವಿತರಿಸಿದ ನಂತರ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿಟ್ಟಿರುವ ಅನುದಾನ 24.10 ರಡಿ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ, 7 ಮಂದಿಗೆ ಅಡುಗೆ ಅನಿಲ ಸಂಪರ್ಕ, 5 ಮಂದಿಗೆ ಮನೆ ದುರಸ್ತಿಗಾಗಿ ಸಹಾಯಧನ, ಒಬ್ಬರಿಗೆ ಶಸ್ತ್ರ ಚಿಕಿತ್ಸೆಗಾಗಿ (ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ), 6 ವರ್ಷದೊಳಗಿನ ಮಕ್ಕಳಿಗೆ ಜೀವ

(ಮೊದಲ ಪುಟದಿಂದ) ವಿಮೆ ಪ್ರಿಮಿಯಂ, ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ 5 ಮಂದಿಗೆ ತಲಾ 50 ಸಾವಿರ ರೂ ಸಹಾಯಧನ ಒದಗಿಸಲಾಗಿದೆ. ಇತರೆ ಆರ್ಥಿಕವಾಗಿ ಹಿಂದುಳಿದವರಿಗೆ 7.25 ರಡಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಲು ನಗರಸಭೆ ಮುಂದಾಗಿದ್ದು, ಆ ನಿಟ್ಟಿನಲ್ಲಿ 11 ಮಂದಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಸಹಾಯಧನ, ಎರಡು ಮಂದಿಗೆ ಪಕ್ಕ ಮನೆ ನಿರ್ಮಾಣಕ್ಕಾಗಿ ತಲಾ ಒಂದು ಲಕ್ಷ ರೂ, ಸಣ್ಣ ಉದ್ಯಮ ನಡೆಸಲು ಒಬ್ಬರಿಗೆ ಸಹಾಯಧನ, ಇಬ್ಬರಿಗೆ ಶಸ್ತ್ರ ಚಿಕಿತ್ಸೆಗಾಗಿ ಧನಸಹಾಯ ಒದಗಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷರು ತಿಳಿಸಿದರು.ಹಾಗೆಯೇ ವಿಕಲಚೇತನರಿಗಾಗಿ ಶೇ.3 ರಷ್ಟು ಅನುದಾನದಡಿ ವಿಕಲಚೇತನರ ಪೋಷಣೆಗಾಗಿ ಸಂಬಂಧಪಟ್ಟ ಪೋಷಕರಿಗೆ 15 ಮಂದಿಗೆ ತಲಾ 6 ಸಾವಿರ ರೂ. ನಂತೆ 90 ಸಾವಿರ ರೂ. ವೆಚ್ಚ ಮಾಡಲಾಗಿದೆ, ಶಸ್ತ್ರ ಚಿಕಿತ್ಸೆಗಾಗಿ 30 ಸಾವಿರ ರೂ. ಧನ ಸಹಾಯ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಗರಸಭಾ ಸದಸ್ಯರಾದ ಜುಲೇಕಾಬಿ, ಪೌರಾಯುಕ್ತರಾದ ಬಿ.ಶುಭಾ, ಸವಿತಾ ಇತರರು ಇದ್ದರು.