ಮಡಿಕೇರಿ, ಏ. 19: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕೊಡವ ಕೇರಿಯ 11ನೇ ವರ್ಷದ ಮಹಾಸಭೆ ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್‍ನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಪ್ಪ ಕೇರಿಯ ಅಧ್ಯಕ್ಷ ನಾಯಕಂಡ ಬ್ರೌನ್ ಕುಂಞಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಮುಖ್ಯ ಅತಿಥಿಗಳಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೇರಿಯ ಮಾಜಿ ಅಧ್ಯಕ್ಷ ಕಲ್ಲುಮಾಡಂಡ ಸುಬ್ಬಯ್ಯ ಭಾಗವಹಿಸಿ ಹಲವು ಸಲಹೆಗಳನ್ನು ನೀಡಿದರು.

ಇತ್ತೀಚೆಗೆ ಮೃತಪಟ್ಟ ಕೊಡವ ಕೇರಿಯ ಸದಸ್ಯರಿಗೆ ಇದೇ ಸಂದರ್ಭ ಸಂತಾಪ ಸೂಚಿಸಲಾಯಿತು. ಕೇರಿಯ ಸದಸ್ಯ ಬೊಳ್ಳಜೀರ ಅಯ್ಯಪ್ಪ ಸ್ವಾಗತಿಸಿದರು. ಕೇರಿಯ ಪ್ರಗತಿ ವರದಿಯನ್ನು ಗೌರವ ಕಾರ್ಯದರ್ಶಿ ಚೋಳಪಂಡ ವಿಜಯ್ ಅವರು ನೀಡಿದರು. ಇದೇ ಸಂದರ್ಭ ಕೊಡವ ಕೇರಿಯ ಸದಸ್ಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕೇರಿಯ ಸದಸ್ಯೆ ಚೊಟ್ಟಂಡ ದಿವ್ಯ ವಂದಿಸಿದರು.