ಗೋಣಿಕೊಪ್ಪಲು, ಏ. 18: ಇಂದು ಬೆಳಿಗ್ಗೆಯಿಂದಲೇ ಕೊಡಗು ಒಳಗೊಂಡಂತೆ ರಾಜ್ಯದ ಹೆಚ್ಚಿನ ಭಾಗದಲ್ಲಿ ಕಾಡಾನೆಯೊಂದು ಪ್ರಯಾಸಕರವಾಗಿ ವಿನೂತನವಾಗಿ ಅಳವಡಿಸಿರುವ ರೈಲ್ವೇ ಕಂಬಿಯ ಮೂಲಕ ನಿರ್ಮಿಸಿರುವ ಬೇಲಿಯನ್ನು ದಾಟುತ್ತಿರುವ ವಿವಿಧ ಭಂಗಿಗಳ ಚಿತ್ರಣ ‘ವಾಟ್ಸಾಪ್’ ನಲ್ಲಿ ಹರಿದಾಡುತ್ತಿದೆ. ಇದು ಕೊಡಗಿನದ್ದೋ ಅಥವಾ ಪಕ್ಕದ ಜಿಲ್ಲೆಯದ್ದೋ ಯಾರಿಗೂ ಗೊತ್ತಿಲ್ಲ?
ಇತ್ತೀಚೆಗೆ ನಿಟ್ಟೂರು ಸಮೀಪ ಕುಂಬಾರ ಕಟ್ಟೆಯಲ್ಲಿ ಸುಮಾರು 1.3 ಕಿ.ಮೀ. ಬೇಲಿಯನ್ನು ನಿರ್ಮಿಸಲಾಗಿದ್ದು, ಶಾಸಕ ಬೋಪಯ್ಯ ಅವರು ಉದ್ಘಾಟನೆ ನೆರವೇರಿಸಿದ್ದರು. ಆನೆ ದಾಟುತ್ತಿರುವದು ಕೊಡಗಿನಲ್ಲಿಯೋ, ಹೆಚ್.ಡಿ.ಕೋಟೆ ರೈಲ್ವೇ ಹಳಿ ಬೇಲಿಯನ್ನೋ ಅಥವಾ ಬಂಡಿಪುರದಲ್ಲಿ ಅಳವಡಿಸಲಾದ ಬೇಲಿಯನ್ನೋ ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಆನೆ ಯಾವದೇ ಅಡೆತಡೆಯನ್ನೂ ಬಿಡದೆ ಕೃಷಿಕರ ತೋಟಕ್ಕೆ ನಿರಂತರ ನುಸುಳುತ್ತಿರುವದಂತೂ ಸ್ಪಷ್ಟ.
ಕೊಡಗು ಜಿಲ್ಲೆ ಅದರಲ್ಲೂ ಪ್ರಮುಖವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿ ಈ ಹಿಂದೆ ಕಾಡಾನೆಗಳು ಸಮೀಪದ ಹಳ್ಳಿಗಳಿಗೆ ನುಸುಳದಂತೆ ಮೊದಲಿಗೆ ಆನೆ ಕಂದಕಗಳನ್ನು ತೋಡಲಾಗಿತ್ತು. ಆನೆಕಂದಕದ ಮೇಲೆ ಭಾರೀ ಗಾತ್ರದ ಮರವನ್ನೂ ಬೀಳಿಸಿ ಚಾಕಚಕ್ಯತೆಯಿಂದ ಕಾಡಾನೆಗಳು ಬಾಳೆಲೆ ವ್ಯಾಪ್ತಿಯಲ್ಲಿ ನುಸುಳಿ ಬಂದಿದ್ದ ಉದಾಹರಣೆಗಳಿದ್ದವು. ನಂತರ ವಿದ್ಯುತ್ ತಂತಿ ಬೇಲಿಯನ್ನು ಅಳವಡಿಸಲಾಗಿದ್ದು ಮಾನವನ ಹಸ್ತಕ್ಷೇಪದಿಂದಾಗಿ ಹಾಗೂ ವಿವಿಧ ತಾಂತ್ರಿಕ ವೈಫಲ್ಯದಿಂದಾಗಿ ಕಾಡಾನೆ ನಾಡಿಗೆ ನುಸುಳಿ ಬರುವದನ್ನು ತಡೆಯಲು ಸಾಧ್ಯವಾಗಿರಲಿಲ್ಲ. ವಿದ್ಯುತ್ ತಂತಿ ಬೇಲಿ ಅಳವಡಿಕೆಗೆ ಕೋಟಿಗಟ್ಟಲೆ ಹಣ ವಿನಿಯೋಗವಾಗಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಈ ಹಂತದಲ್ಲಿ ಅದ್ಯಾರೋ ಬುದ್ದಿಜೀವಿ ಇಲಾಖೆಯ ಅಧಿಕಾರಿ, ಆನೆಗಳು ಜನವಸತಿ ಕಡೆಗೆ ನುಸುಳದಿರಲು ರೈಲ್ವೇ ಹಳಿಗಳ ಬೇಲಿಯ ಉಪಾಯ ನೀಡಿದ್ದರು. ರೈಲ್ವೇ ಇಲಾಖೆಯಲ್ಲಿ ನಿಷ್ಪ್ರಯೋಜಕ ವಾಗಿರುವ ಕಬ್ಬಿಣದ ಹಳಿಗಳನ್ನು ಹರಾಜು ಪ್ರಕ್ರಿಯೆ ಮೂಲಕ ಹೊಂದಿಕೊಂಡು ಬೇಲಿಯಂತೆ ಅರಣ್ಯದ ಸರಹದ್ದಿನಲ್ಲಿ ಅಳವಡಿಸುವ ಪ್ರಕ್ರಿಯೆ ಆರಂಭವಾಯಿತು. ಮೊದಲಿಗೆ ಬಂಡಿಪುರ, ನಂತರ ಹೆಚ್.ಡಿ.ಕೋಟೆಯ ಅಂತರಸಂತೆ ವ್ಯಾಪ್ತಿಯಲ್ಲಿ ಅಳವಡಿಸಿದ ನಂತರ ಇತ್ತೀಚೆಗೆ ಬಾಳೆಲೆ, ನಿಟ್ಟೂರು ಗ್ರಾಮ ವ್ಯಾಪ್ತಿಯ ಕುಂಬಾರ ಕಟ್ಟೆ ಎಂಬಲ್ಲಿ ಸುಮಾರು 1.3 ಕಿ.ಮೀ. ರೈಲ್ವೇ ಕಂಬಿ ತಂತಿಬೇಲಿಯನ್ನು ಅಳವಡಿಸಲಾಯಿತು. ಸುಮಾರು ಎರಡು ಮೀಟರ್ ಎತ್ತರದಲ್ಲಿ ಬೇಲಿ ನಿರ್ಮಾಣ ಮಾಡಲಾಗಿದ್ದು ಸದರಿ ‘ವಾಟ್ಸಾಪ್’ನಲ್ಲಿ ಹರಿದಾಡುತ್ತಿರುವ ಚಿತ್ರಣದಲ್ಲಿರುವ ರೈಲ್ವೇ ಬೇಲಿಯನ್ನು ಹೋಲುತ್ತಿಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಪಷ್ಟ ಪಡಿಸಿದ್ದಾರೆ. ಸುಮಾರು 1.50 ಮೀಟರ್ ಉದ್ದದ ಬೇಲಿ ನಿರ್ಮಾಣ ಪ್ರಗತಿಯಲ್ಲಿದ್ದು ಶಾಸಕ ಬೋಪಯ್ಯ ಅವರು ಇತ್ತೀಚೆಗೆ ಉದ್ಘಾಟನೆ ನೆರವೇರಿಸಿದ್ದರು.
ಸುಮಾರು ರೂ.80 ಲಕ್ಷ ವೆಚ್ಚದ ಬೇಲಿ ಕಾಮಗಾರಿ ಇದಾಗಿದ್ದು ನಿಟ್ಟೂರು ಗ್ರಾಮಸ್ಥರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇದೀಗ ವಾಟ್ಸಾಪ್ ಚಿತ್ರಣ ಅರಣ್ಯ ಸರಹದ್ದಿನಲ್ಲಿರುವ ಜನತೆಯ ನಿದ್ದೆಗೆಡುವಂತೆ ಮಾಡಿದೆ. ಕುಂಬಾರಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಉದ್ಧೇಶಿತ ಬೇಲಿಯು ಸುಮಾರು 1,300 ಮೀಟರ್ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆಚೌಕೂರು ವನ್ಯಜೀವಿ ವಲಯಕ್ಕೆ ಒಳಪಟ್ಟಿದ್ದರೆ, ಸುಮಾರು 400 ಮೀಟರ್ ಬೇಲಿಯು ನಾಗರಹೊಳೆ ಕಲ್ಲಳ ವಲಯಕ್ಕೆ ಸೇರುತ್ತದೆ.
ಆನೆಚೌಕೂರು ವನ್ಯಜೀವಿ ವಲಯಾರಣ್ಯಾಧಿಕಾರಿ ಕಿರಣ್ಕುಮಾರ್