ಕುಶಾಲನಗರ, ಏ. 18: ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತನೊಬ್ಬನ ಸಾವಿಗೆ ಕಾರಣವಾದ ಕಾರ್ತಿಕ್ (8 ವರ್ಷ) ಆನೆಯನ್ನು ಶಿಬಿರದಿಂದ ಸ್ಥಳಾಂತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ಹರಿಸಿದ್ದಾರೆ.

ವಿಜಯ ಎಂಬ ಆನೆಗೆ ಜನಿಸಿದ ಕಾರ್ತಿಕ್ ಕಳೆದ 6 ವರ್ಷಗಳಿಂದ ದುಬಾರೆ ಸಾಕಾನೆ ಶಿಬಿರದಲ್ಲಿ ಇದ್ದು ಪ್ರವಾಸಿಗರಿಗೆ ಮನರಂಜನೆ ನೀಡುತ್ತಿತ್ತು. ಆದರೆ ಕೆಲವು ಸಮಯದಿಂದ ಕಾರ್ತಿಕ್ ಪ್ರವಾಸಿಗರ ಮೇಲೂ ಧಾಳಿ ಮಾಡಿದ ಪ್ರಕರಣಗಳು ಕಂಡುಬಂದಿದ್ದು ಈ ನಿಟ್ಟಿನಲ್ಲಿ ಮಾವುತರು, ಕಾವಾಡಿಗರು ಎಚ್ಚರವಹಿಸುತ್ತಿದ್ದರು. ಆದರೆ ಸೋಮವಾರ ಮುಂಜಾನೆ ನಡೆದ ಘಟನೆಯಿಂದ ಅರಣ್ಯಾಧಿಕಾರಿಗಳು ಆನೆಮರಿಯನ್ನು ದುಬಾರೆ ಶಿಬಿರದಿಂದ ಮತ್ತೆ ಆನೆಕಾಡು ಶಿಬಿರಕ್ಕೆ ಸ್ಥಳಾಂತರಿಸಲು ಕ್ರಮಕೈಗೊಂಡಿದ್ದಾರೆ. ದುಬಾರೆ ಶಿಬಿರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಾನೆಗಳನ್ನು ಸರಿಯಾಗಿ ಆರೈಕೆ ಮಾಡುವಲ್ಲಿಯೂ ಸಿಬ್ಬಂದಿಗಳು ವಿಫಲರಾಗಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ದಿನಕೊಬ್ಬರಂತೆ ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರಣದಿಂದ ಕೆಲವು ಆನೆಗಳಿಗೆ ಮಾವುತ ಕಾವಾಡಿಗರೊಂದಿಗೆ ಹೊಂದಿಕೊಳ್ಳುವದು ಕೂಡ ಕಷ್ಟಸಾಧ್ಯವಾದ ಮಾತಾಗಿದೆ. ಸಮರ್ಪಕ ಉಸ್ತುವಾರಿ ಇಲ್ಲದೆ ಕೆಲವು ಸಿಬ್ಬಂದಿಗಳು ಮದ್ಯ ಸೇವಿಸಿ ಆನೆ ಬಳಿ ಓಡಾಡುತ್ತಿರುವ ಸಂದರ್ಭ ಸಾಕಾನೆಗಳು ವಿಚಲಿತಗೊಳ್ಳುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ ಎನ್ನುವದು ಸ್ಥಳೀಯರ ಆರೋಪವಾಗಿದೆ.

ಆನೆಕಾಡು ಶಿಬಿರದಲ್ಲಿರುವ ವಿಜಯ ಆನೆಯೊಂದಿಗೆ ಕಾರ್ತಿಕ್ ಸೇರ್ಪಡೆಗೊಂಡಲ್ಲಿ ತಾಯಿಯ ಸಾನಿಧ್ಯದಿಂದ ಮತ್ತೆ ಶಾಂತ ಪರಿಸ್ಥಿತಿಗೆ ಹಿಂತಿರುಗುವ ಸಾಧ್ಯತೆ ಇದೆ ಎನ್ನಲಾಗಿದೆ.