ಮಡಿಕೇರಿ ಏ. 18 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಅವರು ಸಂಪಿಗೆಕಟ್ಟೆಯಲ್ಲಿ ನೀರು ಹರಿಯುವ ಕಡಂಗವನ್ನು ಒತ್ತುವರಿ ಮಾಡಿ ಕೊಂಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ದೂರಿನ ಮೇರೆಗೆ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸುರಯ್ಯ ಅವರು ಹಾಕಿದ್ದ ಬೇಲಿಯನ್ನು ತೆರವು ಗೊಳಿಸಿದ ಘಟನೆ ಇಂದು ನಡೆಯಿತು.
ಸಂಪಿಗೆಕಟ್ಟೆಯಲ್ಲಿ ಸುರಯ್ಯ ಅಬ್ರಾರ್ ಅವರಿಗೆ ಸೇರಿದ 51 ಸೆಂಟ್ ಜಾಗವಿದೆ. ಆ ಜಾಗಕ್ಕೆ ಮೂವರು ಪಾಲುದಾರರಿದ್ದಾರೆ ಎನ್ನಲಾಗಿದೆ. ಆ ಜಾಗದ ಸಮೀಪದಲ್ಲೇ ಕಡಂಗವಿದ್ದು, ಅದನ್ನು ಕೂಡ ಒತ್ತುವರಿ ಮಾಡಿ ಕೊಳ್ಳಲಾಗಿದೆ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಸನ್ನಭಟ್ ನಗರಸಭೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧ್ಯಕ್ಷೆ ಕಾವೇರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಸದಸ್ಯರಾದ ಪೀಟರ್, ಸಂಗೀತಾ ಪ್ರಸನ್ನ, ಚುಮ್ಮಿ ದೇವಯ್ಯ ಇವರುಗಳು ಪರಿಶೀಲನೆ ನಡೆಸಿ ಕಡಂಗ ಒತ್ತುವರಿ ಆಗಿದೆ ಎಂದು ಆಕ್ಷೇಪಿಸಿ ಅಲ್ಲಿ ಹಾಕಲಾಗಿದ್ದ ಬೇಲಿಯನ್ನು ಕಾರ್ಮಿಕರಿಂದ ತೆರವುಗೊಳಿಸಿದ್ದಾರೆ.
ಸುರಯ್ಯ ಆಕ್ಷೇಪ : ಬೇಲಿ ತೆರವುಗೊಳಿಸಿದ ಬಳಿಕ ಸ್ಥಳಕ್ಕೆ ಬಂದ ಸುರಯ್ಯ ಅಬ್ರಾರ್ ಬೇಲಿ ತೆರವುಗೊಳಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ತಾನು ಬೇಲಿ ಹಾಕಿರುವ ಜಾಗ ಕಡಂಗ ಎಂಬದಕ್ಕೆ ದಾಖಲೆಯಿಲ್ಲ. ಒಂದು ವೇಳೆ ದಾಖಲೆ ಇರುವದೇ ಆದರೆ ಅದನ್ನು ತೋರಿಸಿ ತನಗೆ ಮಾಹಿತಿ ನೀಡಿ ಬೇಲಿ ತೆರವು ಮಾಡಬೇಕಿತ್ತು. ಯಾವದೇ ಮಾಹಿತಿ ನೀಡದೆ ತೆರವುಗೊಳಿಸಿರುವದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಾನೂನಿನಡಿ ಕ್ರಮ : ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಇವರುಗಳು ಕಾನೂನಿನಡಿ ಕಡಂಗ ಒತ್ತುವರಿಗೆ ಅವಕಾಶವಿಲ್ಲ. ಕನ್ನಂಡಬಾಣೆ ಪಂಪ್ಹಾಸ್ಗೆ ನೀರಿನ ಮೂಲವಾದ ಕಡಂಗವನ್ನು ಒತ್ತುವರಿ ಮಾಡಿಕೊಂಡಿರುವದು ಕಂಡುಬಂದ ಹಿನ್ನೆಲೆ ಬೇಲಿಯನ್ನು ತೆರವುಗೊಳಿಸಲಾಗಿದೆ. ಸರ್ವೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಹಾಲಿ - ಮಾಜಿಗಳ ವಾಕ್ಸಮರ : ಬೇಲಿ ತೆರವುಗೊಳಿಸಿದ ಬಳಿಕ ನಗರಸಭಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ತೆರಳಿದ ಬಳಿಕ ಮೂಡಾ ಹಾಲಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಚುಮ್ಮಿ ದೇವಯ್ಯ ಹಾಗೂ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ನಡುವೆ ವಾಕ್ಸಮರ ನಡೆಯಿತು. ಬೇಲಿ ಹಾಕಿರುವ ಜಾಗ ಕಡಂಗವಲ್ಲ. ಮಾಹಿತಿ ನೀಡದೆ ಬೇಲಿ ತೆರವುಗೊಳಿಸಿದ ನಗರಸಭೆಯ ಕ್ರಮ ಸರಿಯಲ್ಲ ಎಂದು ಸುರಯ್ಯ ವಾದಿಸಿದರೆ, ನಗರಸಭಾ ಸಾಮಾನ್ಯ ಸಭೆಗಳಲ್ಲಿ ಕನ್ನಂಡಬಾಣೆಯ ಜಲ ಮೂಲಕ್ಕೆ ಧಕ್ಕೆ ಆಗುತ್ತಿರುವ ಬಗ್ಗೆ ಆಗಿಂದಾಗ್ಗೆ ಚರ್ಚೆಗಳಾಗುತ್ತಿದೆ. ಹೀಗಿರುವಾಗ ನಗರಸಭೆಗೆ ಯಾವದೇ ಮಾಹಿತಿ ನೀಡದೆ ಬೇಲಿ ಹಾಕಿರೋದು ಎಷ್ಟು ಸರಿ ಎಂದು ಚುಮ್ಮಿ ಪ್ರತ್ಯುತ್ತರ ನೀಡಿದರು. ಈ ಸಂದರ್ಭ ಕೆಲ ಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.