ಮಡಿಕೇರಿ, ಏ.19 : ರೋಟರಿ ಮಿಸ್ಟಿ ಹಿಲ್ಸ್, ಆರೋಗ್ಯ ಸೇವಾ ಘಟಕ ಸ್ವರ್ಣ ಕ್ಲಿನಿಕ್, ಹಿಂದೂ ಸುಧಾರಣಾ ಸಮಿತಿಯ ವತಿಯಿಂದ ತಾ. 21 ರಂದು ನೆಲ್ಯಹುದಿಕೇರಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಮಿಸ್ಟಿ ಹಿಲ್ಸ್‍ನ ಕಾರ್ಯದರ್ಶಿ ಡಾ| ಎನ್.ಎಸ್. ನವೀನ್ ಶಿಬಿರದ ಕುರಿತು ಮಾಹಿತಿ ನೀಡಿದರು. ಸುಳ್ಯದ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯದ ಸಹಯೋಗ ದೊಂದಿಗೆ ಬೆಳಿಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ನೆಲ್ಯಹುದಿಕೇರಿಯ ಮುತ್ತಪ್ಪ ಸಭಾಂಗಣ ಹಾಗೂ ಆಂಗ್ಲೋ ವರ್ನಾಕ್ಯುಲರ್ ಶಾಲಾ ಆವರಣದಲ್ಲಿ ಶಿಬಿರ ನಡೆಯಲಿದೆ.

ಜನರಲ್ ಮೆಡಿಸಿನ್, ಶಸ್ತ್ರ ಚಿಕಿತ್ಸಾ ವಿಭಾಗ, ಮಕ್ಕಳ ಚಿಕಿತ್ಸಾ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಜನನ ಮತ್ತು ಲೈಂಗಿಕ ವಿಭಾಗ ಹಾಗೂ ಸ್ತ್ರೀ ರೋಗ ವಿಭಾಗಗಳಲ್ಲಿ ರೋಗಿಗಳ ತಪಾಸಣೆ ನಡೆಯಲಿದೆÉ. ವಿಶೇಷ ಸೌಲಭ್ಯಗಳ ಅಗತ್ಯವಿದ್ದಲ್ಲಿ ಮಧು ಮೇಹ ಪರೀಕ್ಷೆ, ಇಸಿಜಿ ಕೂಡ ಮಾಡಲಾಗುವದು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸುಳ್ಯದ ಕೆವಿಜಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವದು ಎಂದು ಡಾ| ನವೀನ್ ಮಾಹಿತಿ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಇದುವರೆಗೆ ಜಿಲ್ಲೆಯಲ್ಲಿ ಮಧು ಮೇಹ ಪತ್ತೆ ಹಚ್ಚುವ ಸುಮಾರು 35 ಶಿಬಿರಗಳನ್ನು ನಡೆಸಲಾಗಿದ್ದು, ಸಾವಿರ ರೋಗಿಗಳು ಇದರ ಲಾಭವನ್ನು ಪಡೆದಿದ್ದಾರೆ. ಪ್ರತಿ ಶೇ.13 ರಿಂದ 14 ರಷ್ಟು ಮಧುಮೇಹಿ ರೋಗಿಗಳು ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದರು. ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಕಲ್ಪಿಸಬೇಕೆನ್ನುವ ಉದ್ದೇಶದಿಂದ ಗ್ರಾಮಿಣ ಭಾಗದಲ್ಲಿ ಶಿಬಿರಗಳನ್ನು ನಡೆಸುತ್ತಿರುವದಾಗಿ ಅವರು ಹೇಳಿದರು.

ಹಿಂದೂ ಸಮಾಜ ಸುಧಾರಣ ಸಮಿತಿಯ ಅಧ್ಯಕ್ಷ ವಸಂತಕುಮಾರ್ ಹೊಸಮನೆ ಮಾತನಾಡಿ, ಶಿಬಿರವನ್ನು ಡಾ| ಚಿದಾನಂದ ಉದ್ಘಾಟಿಸಲಿದ್ದು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿರುವರೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ಆರ್. ಸತೀಶ್ ಉಪಸ್ಥಿತರಿದ್ದರು.