ಸುಂಟಿಕೊಪ್ಪ, ಮಾ. 23: ಕರಿಮೆಣಸು ಕುಯ್ಯತ್ತಿದ್ದಾಗ ಆಕಸ್ಮಿಕವಾಗಿ ಅಲೂಮಿನಿಯಂ ಏಣಿ ಜಾರಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಕೆದಕಲ್ ಸಮೀಪದ ಹಾಲೇರಿಯ ಬಿ.ಎಸ್. ಬಾಲಕೃಷ್ಣ ರೈ ಎಂಬವರ ತೋಟದಲ್ಲಿ ತಮಿಳುನಾಡು ಮೂಲದ ಸೇಲಂ ನಿವಾಸಿ ಪಳನಿ (45) ಎಂಬಾತ ಮರವೇರಿ ಏಣಿಯಿಂದ ಕರಿಮೆಣಸು ಕುಯ್ಯುತ್ತಿದ್ದಾಗ ಆಕಸ್ಮಿಕವಾಗಿ ಅಲೂಮಿನಿಯಂ ಏಣಿ ಜಾರಿ ವಿದ್ಯುತ್ ತಂತಿಗೆ ಬಿದ್ದಿದೆ. ಪರಿಣಾಮ ಏಣಿಯ ಮೇಲಿದ್ದ ಪಳನಿ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ.
ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಕಟುಂಬಕ್ಕೆ ಮೃತ ಶರೀರವನ್ನು ಒಪ್ಪಿಸಲಾಯಿತು.