ನಾಪೋಕ್ಲು, ಆ. 27: ಹೊದ್ದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿ ಬಿದ್ದಿವೆ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಮೀಪದ ಹೊದ್ದೂರು ಗ್ರಾಮದ ಕಬಡಕೇರಿ ಧವಸ ಭಂಡಾರ ಸಭಾಂಗಣದಲ್ಲಿ ನಡೆದ ಹೊದ್ದೂರು ಗ್ರಾಮ ಪಂಚಾಯಿತಿಯ 2016-17ರ ಗ್ರಾಮಸಭೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು ರಸ್ತೆ ದುರಸ್ತಿ, ನೀರು ಸರಬರಾಜು ಕೂಲಿ ಕಾರ್ಮಿಕರ ಮನೆಗಳಿಗೆ ಹಕ್ಕುಪತ್ರ, ವಲಸಿಗ ಅಸ್ಸಾಂ ಕಾರ್ಮಿಕರ ಮಕ್ಕಳ ಶಾಲಾ ದಾಖಲಾತಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಹೊದ್ದೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಬಡಕೇರಿ ಗ್ರಾಮಕ್ಕೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು, ಬೇಸಿಗೆಯಲ್ಲಿ ನೀರು ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಬಡಕೇರಿಯಲ್ಲಿ ಒಂದು ಬಾವಿ ಇದ್ದು, ಗ್ರಾಮಸ್ಥರು ನೀರಿಗಾಗಿ ತೆರಳಲು ಸೂಕ್ತ ದಾರಿ ಇಲ್ಲ. ಪಾಲೇಮಾಡು ಗ್ರಾಮದಲ್ಲಿ ವಾಸವಿರುವ ಕಾರ್ಮಿಕರಿಗೆ ಹಕ್ಕುಪತ್ರ ದೊರೆತಿಲ್ಲ. ಮನೆಗೆ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಕಾರ್ಡ್ ಅವಶ್ಯಕತೆ ಇದೆ. ಮುಂತಾದ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖಾಧಿಕಾರಿಗಳು ಇಲಾಖೆಯಿಂದ ಲಭಿಸುವ ಯೋಜನೆಗಳ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ. ದಿನೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೋಡಲ್ ಅಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಹಾಸ್ ಪಾಲ್ಗೊಂಡಿದ್ದರು. ಪಂಚಾಯಿತಿ ಅಧಿಕಾರಿ ಚೋಂದಕ್ಕಿ ಸ್ವಾಗತಿಸಿ, ವಂದಿಸಿದರು.