ಕುಶಾಲನಗರ, ಜು. 16: ನನ್ನ ಪತಿ ಆತ್ಮಹತ್ಯೆಗೆ ಕಾರಣಕರ್ತರೆನ್ನಲಾದ ಓರ್ವ ಸಚಿವರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಸರಕಾರ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವದು ತನಗೆ ತುಂಬಾ ಬೇಸರ ತಂದಿದೆ ಎಂದಿರುವ ಡಿವೈಎಸ್ಪಿ ಗಣಪತಿ ಅವರ ಪತ್ನಿ ಪಾವನ ತಮ್ಮ ಕುಟುಂಬ ಕೂಡ ಅವರ ಹಾದಿಯನ್ನೇ ಹಿಡಿಯಬೇಕೇ ಎಂಬ ಆಕ್ರೋಶದ ನುಡಿಗಳನ್ನಾಡಿದ್ದಾರೆ.

ರಂಗಸಮುದ್ರದ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ನೀಡಿದ ದೂರಿನ ಮೇಲೆ ಎಫ್‍ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಇನ್ನೊಂದೆಡೆ ತನ್ನ ಪತಿ ಸಾವಿಗೂ ಮುನ್ನ ಮಾಧ್ಯಮಕ್ಕೆ ನೀಡಿದ ಹೇಳಿಕೆ ಅನ್ವಯ ಸರಕಾರ ಯಾವದೇ ರೀತಿಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.