ಮಡಿಕೇರಿ, ಸೆ. 15: ಮಡಿಕೇರಿಯ ಹೇರಂಬ-ಹೇಮಂತ್ ಅವಳಿ ಸಹೋದರರು ಪ್ರಸಕ್ತ ಸಾಲಿನ “ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಷಿಪ್”ಗೆ ಆಯ್ಕೆಯಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈದಿರುವ ಈ ಕೊಳಲುವಾದಕರನ್ನು ಗುರುತಿಸಿ ಮುಂಬೈನ ಪ್ರತಿಷ್ಠಿತ ಶ್ರೀ ಷಣ್ಮುಖಾನಂದ ಸಂಗೀತ ಸಭಾ ವತಿಯಿಂದ ತಾ. 16 ರಂದು ನಡೆಯುವ ಸಮಾರಂಭದಲ್ಲಿ ಈ ಗೌರವವನ್ನು ನೀಡಲಾಗುತ್ತದೆ. ಭಾರತರತ್ನ ಗಾನಕೋಗಿಲೆ ಎಂ.ಎಸ್. ಸುಬ್ಬುಲಕ್ಷ್ಮಿಯವರ ಶತಮಾನೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ನೇರಪ್ರಸಾರವನ್ನು ಶಂಕರ ವಾಹಿನಿ ಸಂಜೆ 6 ಗಂಟೆಯಿಂದ ಬಿತ್ತರಿಸಲಿದೆ. ತಾ. 17 ರಂದು ಸಂಜೆ ಷಣ್ಮುಖಾನಂದ ಸಭಾಂಗಣದಲ್ಲಿ ಸಂಗೀತ ಕಲಾನಿಧಿ ಕು. ಕನ್ಯಾಕುಮಾರಿ ಅವರ ನೇತೃತ್ವದಲ್ಲಿ 108 ರಾಗಗಳ ಸಂಯೋಜನೆಯೊಂದಿಗೆ ನಡೆಯುವ ಆಯ್ದ 100 ಕಲಾವಿದರ ತಂಡದಲ್ಲೂ ಹೇರಂಬ-ಹೇಮಂತ ಪಾಲ್ಗೊಳ್ಳಲಿದ್ದಾರೆ. ಫೆಲೋಷಿಪ್‍ನಲ್ಲಿ ಈ ಕ್ಷೇತ್ರದಲ್ಲಿ ಸಾಧನೆಯ ಮುಂದುವರೆಸಲು ಮೂರು ವರ್ಷಗಳ ಕಾಲ ಇವರಿಗೆ ವಾರ್ಷಿಕ ರೂ. 1 ಲಕ್ಷ ಸಹಾಯಧನ ಲಭಿಸಲಿದೆ.

ಈ ಸಹೋದರರು ಚೆನ್ನೈನ ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನಡೆಸಿದ ಸ್ಪಿರಿಟ್ ಆಫ್ ಯೂತ್ ಸಂಗೀತ ಕಛೇರಿಯಲ್ಲಿ “ಬೆಸ್ಟ್ ಇನ್‍ಸ್ಟ್ರುಮೆಂಟಲಿಸ್ಟ್” ಪ್ರಶಸ್ತಿಗಳಿಸಿದ್ದಾರೆ. 19ನೆಯ ವಯಸ್ಸಿನಲ್ಲೇ ಆಕಾಶವಾಣಿ “ಎ” ಗ್ರೇಡ್ ಗಳಿಸಿರುವದೂ ಇವರ ಸಾಧನೆಯಾಗಿದೆ.