ಸೋಮವಾರಪೇಟೆ, ಅ. 31: ಪಟ್ಟಣದಲ್ಲಿ ಮಹಿಳೆಯೋರ್ವರ ಸರಗಳ್ಳತನಕ್ಕೆ ವಿಫಲಯತ್ನ ನಡೆಸಿರುವ ಘಟನೆ ಬಾಣಾವಾರ ರಸ್ತೆಯ ಎಸ್‍ಜೆಎಂ ಶಾಲೆಯ ಮುಂಭಾಗ ನಿನ್ನೆ ಬೆಳಿಗ್ಗೆ ನಡೆದಿದೆ.

ಬಾಣಾವರ ರಸ್ತೆಯ ನಿವಾಸಿ ಭುವನೇಶ್ ಎಂಬವರ ಪತ್ನಿ, ದೀಪಾವಳಿ ಹಬ್ಬದ ಪ್ರಯುಕ್ತ ಮನೆಯ ಮುಂಭಾಗ ರಂಗೋಲಿ ಬಿಡುತ್ತಿದ್ದ ಸಂದರ್ಭ ಪಲ್ಸರ್ ಬೈಕ್‍ನಲ್ಲಿ ಬಂದ ವ್ಯಕ್ತಿ, ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸಮೇತ ಚಿನ್ನದ ಸರವನ್ನು ಕಿತ್ತು ಪರಾರಿಯಾಗಲು ಪ್ರಯತ್ನಿಸಿದ್ದಾನೆ.

ಕೂಡಲೆ ಬೊಬ್ಬೆ ಹಾಕಿದ ಮಹಿಳೆ, ಬೈಕನ್ನು ಹಿಂಬಾಲಿಸಿದ್ದಾರೆ. ತಬ್ಬಿಬ್ಬಾದ ಸರಗಳ್ಳ ಸರವನ್ನು ಜೇಬಿಗೆ ಹಾಕುವ ಸಂದರ್ಭ, ಕೈತಪ್ಪಿನಿಂದ ಸರ ಹೊರಬಿದ್ದಿದೆ. ಭಯದಿಂದ ಸರವನ್ನು ಬಿಟ್ಟು ಕರ್ಕಳ್ಳಿ ರಸ್ತೆಯಲ್ಲಿ ತೆರಳಿದ್ದಾನೆ.

ಧೈರ್ಯದಿಂದ ಮಹಿಳೆ ಬೈಕನ್ನು ಹಿಂಬಾಲಿಸಿ ಓಡಿದ ಪರಿಣಾಮ ಸುಮಾರು 80ಸಾವಿರ ರೂ.ಮೌಲ್ಯದ ಚಿನ್ನದ ಸರ ಮಹಿಳೆಗೆ ಸಿಕ್ಕಿದೆ. ಭುವನೇಶ್ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ಒಂದು ತಿಂಗಳ ಹಿಂದೆಯಷ್ಟೇ ಖಾಸಗಿ ಬಸ್ ನಿಲ್ದಾಣದಲ್ಲಿ, ಕೊತ್ನಳ್ಳಿ ಗ್ರಾಮದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕೀಳಲಾಗಿತ್ತು. ಒಂದು ವಾರದ ಹಿಂದೆ ಪ.ಪಂ. ಸದಸ್ಯೆ ಶೀಲಾ ಡಿಸೋಜ ಅವರ ಮನೆಯ ಮುಂಭಾಗದಿಂದ ಬೈಕ್ ಕಳವು ಮಾಡಲಾಗಿತ್ತು. ಕಳೆದ ಒಂದು ತಿಂಗಳಲ್ಲಿ ಪಟ್ಟಣದಲ್ಲಿ ಮೂರು ಬೈಕ್‍ಗಳು ಕಳವಾಗಿರುವ ಬಗ್ಗೆ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. ನಾಲ್ಕು ದೇವಾಲಯದ ಹುಂಡಿಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.