ವೀರಾಜಪೇಟೆ, ಆ. 28: ಧರ್ಮ ಎಂಬದು ಪ್ರತಿಯೊಬ್ಬರ ಜೀವನದ ತಳಹದಿ. ತತ್ವ ಸಿದ್ಧಾಂತಗಳ ಆಧಾರದ ಮೇಲೆ ಧರ್ಮ ನಿಂತಿದೆ. ಪ್ರತಿ ವರ್ಗದವರಿಗೂ ಧರ್ಮದ ಮಹತ್ವ ಅರಿವಿದ್ದರೆ ಸಮಾಜದಲಿ,್ಲ ರಾಷ್ಟ್ರದಲ್ಲಿ, ವಿಶ್ವದಲ್ಲಿಯೂ ಶಾಶ್ವತವಾಗಿ ಶಾಂತಿ ನೆಲೆಸಲು ಸಾಧ್ಯ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆಯ ಶನೀಶ್ವರ ಭಕ್ತಜನ ಮಂಡಳಿ ವತಿಯಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿನ ಶನೇಶ್ವರ ದೇವಸ್ಥಾನದಲ್ಲಿ ಕೊನೆ ಶ್ರಾವಣದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಶತಮಾನದ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಹಿಂದೂ ಧರ್ಮದಲ್ಲಿ ನಾಲ್ಕು ಪವಿತ್ರ ಶ್ರಾವಣ ಶನಿವಾರಗಳು ಪ್ರಾಮುಖ್ಯತೆಯನ್ನು ಪಡೆದಿವೆ. ಭಕ್ತಾದಿಗಳು ಶ್ರಾವಣ ಪೂಜೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಪಾಪ ವಿಮೋಚನೆಯತ್ತ ಸಾಗಿ ಶಾಂತಿ ನೆಮ್ಮದಿಯ ಜೀವನವನ್ನು ನಿರೀಕ್ಷಿಸುತ್ತಾರೆ. ಇಂದಿನ ಮಠ ಮಾನ್ಯಗಳು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದು ಸ್ವಾಗತಾರ್ಹ. ಹಿಂದೂ, ಕ್ರಿಶ್ಚಿಯನ್, ಇಸ್ಲಾಂ, ಪಾರ್ಸಿ, ಭೌದ್ಧ ಎಲ್ಲಾ ಧರ್ಮಗಳು ಶಾಂತಿಯ ಸಂಕೇತವನ್ನು ಸಾರುತ್ತವೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡರೆ ಸುಖಮಯ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಚಿತ್ರ ಕಲಾವಿದ ಬಿ.ಆರ್. ಸತೀಶ್ ಮಾತನಾಡಿ, ಪ್ರತಿಯೊಂದು ಧರ್ಮದೊಂದಿಗೆ ಜಾತ್ಯತೀತತೆಯ ಭಾವನೆಗಳು ಮೂಡಿ ಬಂದರೆ ಎಲ್ಲೆಡೆಯಲ್ಲಿಯೂ ಶಾಂತಿಯ ಸಂಕೇತವಾಗಲಿದೆ. ಧರ್ಮಕ್ಕನು ಗುಣವಾಗಿ ಪೂಜೆ, ಪುನಸ್ಕಾರ, ಹಬ್ಬ-ಹರಿದಿನಗಳು ಆಚರಿಸುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ದೇವಾಲಯದ ಮಾಜಿ ಅಧ್ಯಕ್ಷ ಎಂ.ಜೆ. ಪೊನ್ನಪ್ಪ, ದೇವಾಲಯದ ಧರ್ಮಾಧಿಕಾರಿ ನಾಗಮ್ಮ ಕೃಷ್ಣಪ್ಪ, ನೇತ್ರಾವತಿ ನರಸಿಂಹ, ಟಿ.ಡಿ. ಮೋಹನ್ ಕುಮಾರ್, ಜನತಾ ದಳದ ಕುಟ್ಟ ವಿಭಾಗದ ಅಧ್ಯಕ್ಷ ಪಿ.ವಿ. ರೆನ್ನಿ ಉಪಸ್ಥಿತರಿದ್ದರು.

ಬಿ.ಆರ್. ಸತೀಶ್ ಅವರು ಕೆಲವೇ ಸೆಕೆಂಡುಗಳಲ್ಲಿ ವಿಘ್ನೇಶ್ವರನ ಚಿತ್ರ ಬಿಡಿಸಿದರು. ದೇವಾಲಯದ ಪ್ರಧಾನ ಅರ್ಚಕ ಯುವರಾಜು ನಿರೂಪಿಸಿದರು.