ಮಡಿಕೇರಿ, ಆ.೨೨: ಬೆಳಗ್ಗಿನ ಜಾವ ಮಂಜು ಮುಸುಕಿದ ವಾತಾವರಣದಲ್ಲಿ ಸಂಭವಿಸಿದ ಅವಘಡದಲ್ಲಿ ಯುವಕನೋರ್ವ ಧಾರುಣವಾಗಿ ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ.

ಇಂದು ಬೆಳಗ್ಗಿನ ಜಾವ ೫.೨೦ರ ವೇಳೆಗೆ ಲಾರಿ ಡಿಕ್ಕಿಯಾಗಿ ಮಡಿಕೇರಿಯ ಗಣಪತಿ ಬೀದಿ ನಿವಾಸಿ, ನಜೀರ್ ಅವರ ಪುತ್ರ ಸಾಹಿಲ್ ಶೇಖ್(೨೭) ಎಂಬಾತ ಸಾವನ್ನಪ್ಪಿದ್ದಾನೆ. ಟ್ಯಾಕ್ಸಿ ಚಾಲಕನಾಗಿದ್ದ ಸಾಹಿಲ್ ಇಂದು ಮುಂಜಾನೆ ಚಿಕ್ಕಪೇಟೆಯ ಪೆಟ್ರೋಲ್ ಬಂಕ್ ಬಳಿ ತನ್ನ ಕಾರನ್ನು ನಿಲ್ಲಿಸಿ ಎದುರುಗಡೆ ನಿರ್ಮಾಣ ಹಂತದಲ್ಲಿರುವ ಪ್ರಯಾಣಿಕರ ತಂಗುದಾಣದ ಬಳಿಗೆ ತೆರಳುತ್ತಿದ್ದ ಸಂದರ್ಭ ಮಂಗಳೂರು ಕಡೆಯಿಂದ ಆಗಮಿಸಿದ ಅನಿಲ ಸಿಲಿಂಡರ್ ಸರಬರಾಜು ಮಾಡುವ ಲಾರಿ(ಟ.ಎಸ್.೧೨ ಯುಡಿ ೩೯೭೮) ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದ ಸಾಹಿಲ್‌ನ ತಲೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದುದರಿಂದ ಸಾಹಿಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಮಂಜಿನಿAದ ಅವಘಡ

ತುಂತುರು ಮಳೆಯೊಂದಿಗೆ ಇಂದು ಮುಂಜಾನೆ ದಟ್ಟವಾದ ಮಂಜು ಕವಿದಿದ್ದುದರಿಂದ ಲಾರಿ ಚಾಲಕನಿಗೆ ರಸ್ತೆಯಲ್ಲಿ ಸಾಹಿಲ್ ಇದ್ದುದು ಗೋಚರವಾಗದೆ ಇದ್ದುದೇ ಈ ಅವಘಡಕ್ಕೆ ಕಾರಣವೆನ್ನಲಾಗಿದೆ. ಮಂಜು ಹಾಗೂ ಬೀದಿ ದೀಪದ ಬೆಳಕೂ ಕೂಡ ಇಲ್ಲದ ಕಾರಣ ಲಾರಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸದೆ ರಸ್ತೆ ಬದಿಗೆ ಬಂದುದರಿAದ ಈ ಅವಘಡ ಸಂಭವಿಸಿದೆ. ಸಾಹಿಲ್‌ಗೂ ಕೂಡ ಲಾರಿ ಡಿಕ್ಕಿಯಾಗುತ್ತದೆ ಎಂಬ ಬಗ್ಗೆ ಅರಿವಾಗಿರಲಿಕ್ಕಿಲ್ಲ ಎಂದು ಪೊಲೀಸರು ಸಂಶಯಿಸಿದ್ದಾರೆ.

ಚಹಾ ಕುಡಿಯುತ್ತಾ ಹೋಗುತ್ತಿದ್ದ

ಬೆಳಿಗ್ಗೆ ಪೆಟ್ರೋಲ್ ಬಂಕ್ ಬಳಿ ಕಾರು ನಿಲ್ಲಿಸಿದ್ದ ಸಾಹಿಲ್ ಪಕ್ಕದಲ್ಲಿಯೇ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಇದ್ದ ಕ್ಯಾಂಟೀನ್‌ನಿAದ ಚಹಾ ಪಡೆದುಕೊಂಡು ಕುಡಿಯುತ್ತಾ ಬಸ್ ಪ್ರಯಾಣಿಕರ ತಂಗುದಾಣದತ್ತ ತೆರಳುತ್ತಿದ್ದ. ಈ ಸಂದರ್ಭ ಮಂಗಳೂರು ಕಡೆಯಿಂದ ಬಂದ ಲಾರಿ ಡಿಕ್ಕಿಯಾಗಿದೆ ಎಂದು ಆತನ ಜೊತೆಯಲ್ಲಿದ್ದ ಸಂಬAಧಿ ಹಾಗೂ ಸ್ನೇಹಿತರು ಹೇಳುತ್ತಾರೆ.

ಶೂಸ್ ನೋಡಿ ಗುರುತು ಪತ್ತೆ

ಅವಘಡ ಸಂಭವಿಸಿದ ಬಳಿಕ ದಟ್ಟವಾದ ಮಂಜಿನ ನಡುವೆ ಮೃತಪಟ್ಟ ಶವ ಯಾರದ್ದೆಂದೂ ಕೂಡ ಯಾರಿಗೂ ಗೊತ್ತಾಗಲಿಲ್ಲ. ತಲೆ ಸಂಪೂರ್ಣ ಜಜ್ಜಿ ಹೋಗಿದ್ದುದರಿಂದ ಆತನೊಂದಿಗೆ ಇದ್ದ ಇತರ ಸ್ನೇಹಿತರಿಗೂ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಸಾಹಿಲ್‌ನ ಸಂಬAಧಿ ಶಬೀರ್‌ಗೆ ಸಾಹಿಲ್ ಧರಿಸಿದ್ದ ಶೂಸ್ ನೋಡಿ ಸಾಹಿಲ್‌ನ ಮೃತದೇಹವೆಂದು ಗೊತ್ತಾಗಿದೆ.

ಬೀದಿ ದೀಪದ ಕೊರತೆ

ನಗರದ ಪ್ರಮುಖ ಪ್ರವೇಶ ದ್ವಾರ ಜ. ತಿಮ್ಮಯ್ಯ ವೃತ್ತದಲ್ಲಿ ಮಂಜು ಕವಿದುದ್ದಲ್ಲದೆ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲದೆ ಬೆಳಕಿನ ಕೊರತೆಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಬೀದಿ ದೀಪದ ವ್ಯವಸ್ಥೆ ಕಲ್ಪಿಸದ ನಗರಸಭೆ ಆಡಳಿತದ ವಿರುದ್ಧ ಜನರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಡಿಕೇರಿ ವೃತ್ತ ನಿರೀಕ್ಷಕ ಚಂದ್ರಶೇಖರ್, ಸಂಚಾರಿ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಶಬೀರ್ ನೀಡಿದ ದೂರಿನನ್ವಯ ಲಾರಿ ಚಾಲಕ ಬೆಳ್ತಂಗಡಿಯ ಪುಂಜಾರ ಕಟ್ಟೆಯ ಶೇಖರ್ ಪೂಜಾರಿ ಎಂಬವರ ಮೇಲೆ ಕ್ರಮಕೈಗೊಂಡಿದ್ದಾರೆ. ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ.