ಕುಶಾಲನಗರ, ಜು. ೨೯: ಕರ್ನಾಟಕ ರಾಜ್ಯ ಅಹಿಂದ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾಗಿ ಮೋಹಿನಿ ಪ್ರಕಾಶ್ ಹಾಗೂ ಪಿರಿಯಾಪಟ್ಟಣ ತಾಲೂಕು ಕಾರ್ಯಾಧ್ಯಕ್ಷರಾಗಿ ಹೆಚ್.ಎನ್.ಮಹದೇವೇಗೌಡ ಅವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ನೂತನ ಪದಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿ ಆದೇಶ ಪತ್ರ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು.

ಅಹಿAದ ರೈತ ಸಂಘ ಕಳೆದ ೮ ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಈಗಾಗಲೆ ಚಟುವಟಿಕೆಗಳನ್ನು ಆರಂಭ ಗೊಳಿಸಲಾಗಿದೆ. ಕೊಡಗು ಜಿಲ್ಲೆಗೆ ಕೂಡ ನೂತನ ಪದಾಧಿಕಾರಿಯನ್ನು ನಿಯೋಜಿಸಲಾಗಿದೆ. ಅಹಿಂದ ಸಂಘಟನೆ ಯಾವುದೇ ಒಂದು ಜಾತಿ, ವರ್ಗ ಆಧರಿತ ಸಂಘವಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದುರ್ಬಲರಾಗಿರುವವರಿಗೆ ನ್ಯಾಯ ಒದಗಿಸಲು ಇರುವಂತಹ ಸಂಘಟನೆ ಆಗಿದ್ದು, ರೈತರು ಅನುಭವಿಸುತ್ತಿರುವ ಗೋಮಾಳ ಜಮೀನಿಗೆ ಸಾಗುವಳಿ, ಪಕ್ಕಾ ಪೋಡಿ ದುರಸ್ತಿ, ಹಾರಂಗಿ ಜಲಾಶಯಕ್ಕೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸುವುದು ಮತ್ತಿತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ರೈತರನ್ನು, ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿರುವ ಪೊಲೀಸ್, ಕಂದಾಯ ಇಲಾಖೆ ವಿರುದ್ಧ ಸಂಘಟನೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳಿಗೂ ಸರಕಾರದ ಮೂಲಕ ಪರಿಹಾರ ಕಲ್ಪಿಸುವಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ನವಿಲೂರು ಚನ್ನಪ್ಪ, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಮಮತ ಕೆ.ಬಿ, ಮೈಸೂರು ಜಿಲ್ಲಾಧ್ಯಕ್ಷೆ ಅನುಪಮಾ ಆರ್ಯ, ಹಾಸನ ಜಿಲ್ಲಾಧ್ಯಕ್ಷ ಚೆಲುವರಾಜು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.