ಕರಿಕೆ, ಜೂ. ೨೦: ಈ ಬಾರಿಯ ಮುಂಗಾರಿನ ವಿಫಲತೆಯ ಪರಿಣಾಮ ಜೂನ್ ತಿಂಗಳಿನಲ್ಲಿ ತುಂಬಿ ಹರಿಯಬೇಕಿದ್ದ ನದಿ ತೊರೆಗಳು ಬತ್ತಿ ಹೋಗಿದ್ದು, ಬ್ರಹ್ಮಗಿರಿ ತಪ್ಪಲಿನ ಹಿಂಭಾಗದಿAದ ಹರಿದು ಕರಿಕೆ ಮೂಲಕ ಸಮುದ್ರ ಸೇರುವ ಚಂದ್ರಗಿರಿ ನದಿಯಲ್ಲಿ ಪ್ರಸ್ತುತ ನೀರಿನ ಪ್ರಮಾಣ ತೀವ್ರ ಇಳಿಕೆಯಾಗಿದೆ.

ಕರಿಕೆಯಲ್ಲಿ ಈ ನದಿಗೆ ಅಡ್ಡಲಾಗಿ ಆಣೆಕಟ್ಟೆ ನಿರ್ಮಾಣ ಮಾಡಿ ಕಿರು ಜಲವಿದ್ಯುತ್ ಉತ್ಪದನಾ ಘಟಕ ಕಾರ್ಯ ನಿರ್ವಹಿಸುತ್ತಿದ್ದು ಇದಕ್ಕೂ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೃಷಿಕರಿಗೆ ಮಳೆಯ ಅಭಾವದಿಂದ ಅಡಿಕೆ, ತೆಂಗು, ಗೇರು, ಬಾಳೆ, ಕಾಳುಮೆಣಸು ಗಿಡ ನಾಟಿ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿದ್ದಾರೆ.

- ಸುಧೀರ್

ರ‍್ಯಾಫ್ಟ್ ಬೋಟ್ ಖರೀದಿಗೆ ಸಹಾಯಧನ

ಮಡಿಕೇರಿ, ಜೂ. ೨೦: ಪರಿಶಿಷ್ಟ ಪಂಗಡದ ಮೂಲನಿವಾಸಿ ಸಮುದಾಯಗಳಾದ ಜೇನುಕುರುಬ ಸಮುದಾಯದವರ ಅಭಿವೃದ್ಧಿ ಕಾರ್ಯಕ್ರಮಗಳ ಸ್ವ-ಉದ್ಯೋಗ ಕಾರ್ಯಕ್ರಮದಡಿ ರ‍್ಯಾಫ್ಟಿಂಗ್ ಬೋಟ್ ಮತ್ತು ಸಲಕರಣೆಗಳ ಖರೀದಿಗೆ ಸಹಾಯಧನ ತಲಾ ರೂ.೨ ಲಕ್ಷಗಳಂತೆ ೯ ಜನ ಫಲಾನುಭವಿಗಳಿಗೆ ಒಟ್ಟು ರೂ.೧೮ ಲಕ್ಷ ಸಹಾಯಧನ ಬಿಡುಗಡೆಯಾಗಿದ್ದು, ರ‍್ಯಾಫ್ಟ್ ಬೋಟ್‌ಗಳನ್ನು ಖರೀದಿಸಿದ್ದ ಈ ೯ ಫಲಾನುಭವಿಗಳಿಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಶಶಿಧರ್ ಎಚ್ ಅವರು ದುಬಾರೆಯಲ್ಲಿ ರ‍್ಯಾಫ್ಟಿಂಗ್ ನಡೆಸಲು ಪರವಾನಿಗೆ ನವೀಕರಿಸಿ ಹಸ್ತಾಂತರಿಸಿದರು.