ವೀರಾಜಪೇಟೆ, ಜೂ. ೧೪: ವೀರಾಜಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಅಮ್ಮತ್ತಿ ವಲಯದ ಚೆಂಬೆಬೆಳ್ಳೂರು ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ದೇವಣಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಬೀದಿ ನಾಟಕ ಕಾರ್ಯಕ್ರಮ ನಡೆಯಿತು.

ಜನಜಾಗೃತಿ ಸಮಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದಿ ನಾಟಕದ ಮುಖಾಂತರ ಜನರಿಗೆ ಮನಮುಟ್ಟುವಂತೆ ಜಾಗೃತಿಯನ್ನು ಮೂಡಿಸಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು ಇದರ ಪ್ರಯೋಜನಗಳನ್ನು ಜನರು ಪಡೆದುಕೊಳ್ಳಿ, ಅನೇಕ ಕಾರ್ಯಕ್ರಮಗಳನ್ನು ನಾವು ಕೂಡ ಮಾಡಿದ್ದು ಆದರೆ ಬೀದಿ ನಾಟಕಗಳಿಂದ ಜನರಿಗೆ ಜಾಗೃತಿಯು ಹೆಚ್ಚಾಗಿ ಮೂಡುತ್ತದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಠಲ್ ಸಾಲಿಯಾನ್ ಮಾತನಾಡಿ, ನಿಸರ್ಗ ಕಲಾಭಿವೃದ್ಧಿ ಬೀದಿ ನಾಟಕ ಕಲಾ ತಂಡದವರು ತುಂಬಾ ಚೆನ್ನಾಗಿ ಸ್ವಚ್ಛತೆಯ ಬಗ್ಗೆ ಹಾಗೂ ನೀರಿನ ಸದ್ಬಳಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಔಷಧೀಯ ಸಸ್ಯ ಸಂಕುಲವಿರುವ ಪ್ರದೇಶವಾಗಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರಲ್ಲದೆ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರಾದ ಮಹೇಶ್ ಮತ್ತು ಸೌಮ್ಯ, ಪ್ರೌಢಶಾಲಾ ಶಿಕ್ಷಕರಾದ ನಂದಿನಿ, ಸಂದೀಪ್, ತಾಲೂಕಿನ ಯೋಜನಾಧಿಕಾರಿ ಹರೀಶ್, ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಪದಾಧಿಕಾರಿಗಳು, ನಿಸರ್ಗ ಕಲಾಭಿವೃದ್ಧಿ ಟ್ರಸ್ಟ್ ಕಲಾ ತಂಡದವರು, ವಲಯದ ಮೇಲ್ವಿಚಾರಕ ದಾನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಉಷಾರಾಣಿ, ಸೇವಾ ಪ್ರತಿನಿಧಿ ದೇವಕಿ, ಎಲ್ಲಾ ಸದಸ್ಯರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಉಪಸ್ಥಿತರಿದ್ದರು.

ನಿಸರ್ಗ ಕಲಾಭಿವೃದ್ಧಿ ತಂಡದವರು ನೀರಿನ ಸದ್ಬಳಕೆ ಬಗ್ಗೆ ಹಾಗೂ ಪ್ಲಾಸ್ಟಿಕ್ ಬಳಕೆಯ ಬಗ್ಗೆ ದುಶ್ಚಟಗಳ ಬಗ್ಗೆ ನಾಟಕದ ಮೂಲಕ ಜಾಗೃತಿಯನ್ನು ಮೂಡಿಸಿದರು.