ವೀರಾಜಪೇಟೆ, ಮೇ ೧೦: ಉಳಿತಾಯ ಖಾತೆಯಲ್ಲಿದ್ದ ಗ್ರಾಹಕರೊಬ್ಬರ ಹಣವನ್ನು ಮತ್ತೋರ್ವ ಗ್ರಾಹಕನ ಖಾತೆಗೆ ವರ್ಗಾಯಿಸಿ ಬ್ಯಾಂಕ್ ಸಿಬ್ಬಂದಿ ಎಡವಟ್ಟು ಮಾಡಿರುವ ಪ್ರಕರಣವೊಂದು ವರದಿಯಾಗಿದೆ.

ವೀರಾಜಪೇಟೆ ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯಲ್ಲಿದ್ದ ಹಣ ಸಂಬAಧಿಸಿದ ಗ್ರಾಹಕನಿಗೆ ತಿಳಿಯದಂತೆ ಮತ್ತೋರ್ವನ ಸಾಲದ ಖಾತೆಗೆ ವರ್ಗಾವಣೆಗೊಂಡಿದೆ.

ಬೇಟೋಳಿ ಗ್ರಾಮದ ರೈತ ಬಿ.ಎಂ. ಶೈಲೇಶ್ ಕಾಮತ್ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ತೋಟದ ನಿರ್ವಹಣೆ ಹಾಗೂ ಗೊಬ್ಬರ ಖರೀದಿಗೆ ಎಂದು ಖಾತೆಯಲ್ಲಿ ೫,೯೯,೮೬೯.೪೬ ರೂ ಹಣವನ್ನು ಠೇವಣಿ ಇಟ್ಟಿದ್ದರು. ಆದರೆ, ಬ್ಯಾಂಕ್ ಕಡೆಯಿಂದ ಶೈಲೇಶ್‌ಗೆ ತಿಳಿಯದಂತೆ ಅವರ ಖಾತೆಯಿಂದ ರೂ. ೨,೮೭,೫೪೨ ಹಣವನ್ನು ಬ್ಯಾಂಕ್ ಸಿಬ್ಬಂದಿ ಏ. ೨೮ ರಂದು ಮತ್ತೊಬ್ಬರ ಸಾಲದ ಖಾತೆಗೆ ವರ್ಗಾಯಿಸಿದ್ದಾರೆ. ಅಲ್ಲದೆ ಈ ಸಂದರ್ಭ ಖಾತೆಯಿಂದ ಹಣ ಕಡಿತವಾಗುವ ಸಂದೇಶವೂ ಬಾರದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ತಾ. ೩೦ ರಂದು ಬ್ಯಾಂಕ್ ಆ್ಯಪ್‌ನ ಮೂಲಕ ಉಳಿತಾಯ ಖಾತೆಯನ್ನು ಪರಿಶೀಲಿಸಿದ ಸಂದರ್ಭ ರೂ. ೨.೮೭ ಲಕ್ಷದಷ್ಟು ಹಣ ಇಲ್ಲದಿರುವುದು ಶೈಲೇಶ್ ಅವರ ಗಮನಕ್ಕೆ ಬಂದಿದೆ. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ತಕ್ಷಣ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿ ಈ ಕುರಿತು ವಿಚಾರಿಸಿದಾಗ ಬ್ಯಾಂಕ್‌ಗೆ ಬರುವಂತೆ ತಿಳಿಸಿದ್ದಾರೆ.

ಬಳಿಕ ಬ್ಯಾಂಕ್‌ಗೆ ತೆರಳಿ ದೂರು ನೀಡುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ದೂರಿನ ಪತ್ರವನ್ನು ಸ್ವೀಕರಿಸದೆ ಸತಾಯಿಸಿ ನಂತರ ದೂರು ಪತ್ರವನ್ನು ಸ್ವೀಕರಿಸಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಸೈಬರ್ ಠಾಣೆಗೆ ದೂರು ನೀಡಲು ಮುಂದಾದಾಗ ಬ್ಯಾಂಕ್‌ನವರು ಕರೆ ಮಾಡಿ ಹಣವನ್ನು ಖಾತೆಗೆ ವರ್ಗಾಯಿಸಿದ್ದಾರೆ.

‘ಬೇರೊಬ್ಬ ವ್ಯಕ್ತಿಯ ವಾಹನ ಸಾಲದ ಖಾತೆಗೆ ಆತನ ಉಳಿತಾಯ ಖಾತೆಯಿಂದ ಹಣವನ್ನು ವರ್ಗಾಯಿಸುವ ಸಂದರ್ಭ ತಾಂತ್ರಿಕ ಸಮಸ್ಯೆಯಿಂದ ಖಾತೆ ಸಂಖ್ಯೆ ಬದಲಾಗಿ ಹಣ ವರ್ಗಾವಣೆಯಿಂದ. ನಿರ್ದಿಷ್ಟ ವ್ಯಕ್ತಿಯ ಖಾತೆಯ ಬದಲಾಗಿ ಶೈಲೇಶ್ ರವರ ಖಾತೆಯಿಂದ ಹಣವನ್ನು ತೆಗೆಯಲಾಗಿತ್ತು. ಈ ಕುರಿತು ಅವರು ದೂರು ನೀಡಿದ ನಂತರ ಅವರ ಖಾತೆಯಿಂದ ತೆಗೆಯಲಾದ ಹಣವನ್ನು ಅವರ ಖಾತೆಗೆ ಹಿಂತಿರುಗಿಸಲಾಗಿದೆ’ ಎಂದು ಸಹಾಯಕ ವ್ಯವಸ್ಥಾಪಕ ಅರುಣ್ ಕುರಿಯನ್ ತಿಳಿಸಿದ್ದಾರೆ.