ಕುಶಾಲನಗರ, ಏ. 11: ಮಹಿಳೆಯರು ತಮ್ಮೊಳಗಿನ ಜ್ಞಾನ, ಶಕ್ತಿ ಹಾಗೂ ಸಾಮಥ್ರ್ಯಗಳ ಅರಿವು ಮಾಡಿಕೊಳ್ಳದೇ ಹೊರ ಪ್ರಪಂಚದ ಏನೆಲ್ಲಾ ಜ್ಞಾನ ಹಾಗೂ ಶಿಸ್ತುಗಳನ್ನು ಅರಿತರೂ ಯಾವುದೇ ಪ್ರಯೋಜನವಿಲ್ಲ ಎಂಬುದು ಅಕ್ಕ ಮಹಾದೇವಿಯ ಆಶಯವಾಗಿತ್ತು ಎಂದು ಕುಶಾಲನಗರದ ಅಕ್ಕನ ಬಳಗದ ಅಧ್ಯಕ್ಷೆ ಕಮಲ ಉದಯಕುಮಾರ್ ಹೇಳಿದರು.

ಕುಶಾಲನಗರ ಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಜವಾದ ಅರಿವು ತನ್ನನ್ನು ತಾನು ಅರಿಯುವುದು. ಹಾಗಾಗಿಯೇ ಕೌಶಿಕ ಮಹಾರಾಜನ ಯಾವುದೇ ಮೋಹಕ್ಕೆ ಒಳಗಾಗದೇ ಎಲ್ಲಾ ಸುಖ ಭೋಗಗಳನ್ನು ತೊರೆದು ಚನ್ನಮಲ್ಲಿಕಾರ್ಜುನನೇ ಎನ್ನ ಪತಿ ಎಂದು ಆರಾಧಿಸಿ ಅಮರತ್ವ ಪಡೆದ ಅಕ್ಕ ಮಹಾದೇವಿ ಹನ್ನೆರಡನೇ ಶತಮಾನದ ಶ್ರೇಷ್ಠ ವಚನಗಾರ್ತಿ ಎಂದು ಬಣ್ಣಿಸಿದರು.

ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ಅಕ್ಕ ಮಹಾದೇವಿ ಅಂದಿನ ಸಮಾಜದಲ್ಲಿ ಇದ್ದ ಕಂದಾಚಾರಗಳ ವಿರುದ್ಧ ಸೆಟೆದು ನಿಂತು ಅನ್ಯಾಯ, ಅಕ್ರಮ, ಮಹಿಳಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಮಹಿಳೆಯರ ಶಕ್ತಿಯಾಗಿದ್ದರು ಎಂದರು. ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಬ ಶಿವಯ್ಯ ಹಾಗೂ ಅಕ್ಕನ ಬಳಗದ ಪ್ರಧಾನ ಕಾರ್ಯದರ್ಶಿ ಮನು ಜಗದೀಶ್ ಅಕ್ಕಾಮಹಾದೇವಿಯ ಜೀವನ ಸಾಧನೆಗಳ ಕುರಿತು ಮಾತನಾಡಿದರು. ಜಯಂತಿ ಅಂಗವಾಗಿ ಅಕ್ಕ ಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ನಡೆಯಿತು. ನಂತರ ಪ್ರಸಾದ ಹಾಗೂ ದಾಸೋಹ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಬಸವೇಶ್ವರ ದೇವಾಲಯದ ಸ್ಥಾಪಕ ಅಧ್ಯಕ್ಷ ಎಂ.ಬಿ. ಬಸವರಾಜು, ವೀರಶೈವ ಮಹಾಸಭಾ ಉಪಾಧ್ಯಕ್ಷ ಹೆಚ್.ಪಿ. ಉದಯಕುಮಾರ್, ಎಂ.ಎಸ್. ಗಣೇಶ್, ಎಂ.ಎಸ್. ಲೋಕೇಶ್, ಅಜಿತ್, ವಿನಯ್, ಹೆಚ್.ಪಿ. ಸಂಗಮೇಶ್, ಮುಳ್ಳುಸೋಗೆ ಬಸವರಾಜು, ಅಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಪುಷ್ಪ ಹೇಮಾಕ್ಷ, ನೇತ್ರಾವತಿ, ಮೋಹಿನಿ, ಮಾಲತಿ ಲೋಕೇಶ್, ವಾಸಂತಿ ಸಂಗಮೇಶ್, ಚಂದ್ರಕಲಾ ಶಾಂಬ ಶಿವಮೂರ್ತಿ, ಗಂಗಮ್ಮ ಶಿವಪ್ಪ, ಪ್ರೇಮಾ ಮಹಾದೇವಪ್ಪ, ಮಮತಾ ಲಿಂಗರಾಜು ಮೊದಲಾದವರಿದ್ದರು.