ಕುಶಾಲನಗರ, ಏ. 4: ಪಟ್ಟಣದ ಬಲಮುರಿ ದೇವಾಲಯ ಬಳಿ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳ 119ನೇ ಜನ್ಮಜಯಂತಿ ಆಚರಣೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕುಶಾಲನಗರ ತಾಲೂಕು ವೀರಶೈವ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ವೃತ್ತವನ್ನು ತಳಿರು ತೋರಣಗಳಿಂದ ಅಲಂಕಾರಗೊಳಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಮಹಾಮಂಗಳಾರತಿ ನೆರವೇರಿತು.

ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಸತತ 69 ವರ್ಷಗಳ ಕಾಲ ಮಠಾಧಿಪತಿಗಳಾಗಿ ತ್ರಿವಿಧ ದಾಸೋಹಗಳಿಂದ ಸಿದ್ದಗಂಗಾ ಮಠವನ್ನು ವಿಶ್ವದ ಎಲ್ಲೆಡೆ ಪಸರಿಸಿದ ಡಾ. ಶಿವಕುಮಾರ ಸ್ವಾಮೀಜಿ ಈ ಶತಮಾನದ ಶ್ರೇಷ್ಠ ಸಂತ ಎಂದರು.

ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ಎಂ. ಮಧುಸೂದನ್ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರ ಜಯಂತಿಯನ್ನು ಜಾತ್ಯತೀತವಾಗಿ ಇಡೀ ನಾಡು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮಡಿಕೇರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಮಹೇಶ್, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕೋಶಾಧ್ಯಕ್ಷ ಕೆ.ಪಿ. ಪರಮೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸರೋಜಾ ಆರಾಧ್ಯ, ತಾಲೂಕು ಅಧ್ಯಕ್ಷೆ ಹೇಮಲತಾ, ವೀರಶೈವ ಮಹಾಸಭಾ ತಾಲೂಕು ಕಾರ್ಯದರ್ಶಿಗಳಾದ ಧರ್ಮೇಂದ್ರ, ಶುಭಶೇಖರ್, ಖಜಾಂಚಿ ಅಜಿತ್, ನಿರ್ದೇಶಕರಾದ ಮಹದೇವಪ್ಪ, ಪಾಪಣ್ಣ, ಪರಮೇಶ್, ಯುವ ಘಟಕದ ಅಧ್ಯಕ್ಷ ಸಚಿನ್, ಕಾರ್ಯದರ್ಶಿ ಕಿಶೋರ್, ವೀರಶೈವ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೀಪಿಕಾ, ಕಾರ್ಯದರ್ಶಿ ಲೇಖನಾ, ಮಮತ, ವಿಜಯಪಾಲಾಕ್ಷ, ಮನುದೇವಿ, ಟಿ.ಜಿ. ಪ್ರೇಮಕುಮಾರ್, ಸಂಗಮೇಶ್, ಸೌಭಾಗ್ಯ ಇತರರಿದ್ದರು.