ಮಡಿಕೇರಿ, ಮಾ. ೧೭: ಕೊಡವ ಅಡ್ವೋಕೇಟ್ ಅಸೋಸಿಯೇಷನ್ ಬೆಂಗಳೂರು ಇವರು ಆಯೋಜಿಸಿದ, ಬೆಂಗಳೂರಿನಲ್ಲಿರುವ ಕೊಡವ ವಕೀಲರ ಕೌಟುಂಬಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಬೆಂಗಳೂರಿನ ವಸಂತನಗರದಲ್ಲಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲ್ಲನಮಾಡ ಕೆ. ಬೋಪಯ್ಯ ಅವರು ವಹಿಸಿದ್ದರು. ಅತಿಥಿಗಳಾಗಿ ಜಸ್ಟೀಸ್ ಅಜ್ಜಿಕುಟ್ಟಿರ ಎಸ್ ಬೋಪಣ್ಣ, ಮೇರಿಯಂಡ ಸಜನ್ ಪೂವಯ್ಯ ಹಾಗೂ ಬಲ್ಲಚಂಡ ಬೆಳ್ಳಿಯಪ್ಪ ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಪ್ರತಿದಿನವೂ ಒತ್ತಡದಲ್ಲಿ ಕಾರ್ಯನಿರ್ವಹಿಸುವ ವಕೀಲರಿಗೆ ಇಂತಹ ಒಂದು ಕಾರ್ಯಕ್ರಮ ಅವಶ್ಯಕವಾಗಿದೆ. ಸದಾ ತಮ್ಮ ಕಕ್ಷಿದಾರನ ಹಿತದ ಬಗ್ಗೆ ಚಿಂತಿಸುವ ವಕೀಲರಿಗೆ ಬಹುತೇಕ ಸಮಯ ತಮ್ಮ ಕುಟುಂಬದೊAದಿಗೆ ಕಳೆಯಲು ಸಾಧ್ಯವಾಗುವುದಿಲ್ಲ. ಇಂತಹ ಕಾರ್ಯಕ್ರಮಗಳಿಂದಾಗಿ ಕುಟುಂಬದವರು ಹಾಗೂ ಇತರ ವಕೀಲರೊಂದಿಗೆ ಸಮಯ ಕಳೆಯಲು ಅವಕಾಶ ಒದಗುವುದು ಒತ್ತಡ ಸನ್ನಿವೇಶದ ನಿವಾರಣೆಗೂ ಸಹಕಾರಿಯಾಗಲಿದೆ.

ಆಧುನಿಕ ಸಮಾಜದಲ್ಲಿ ವಕೀಲರ ಪಾತ್ರ ಬಹುದೊಡ್ಡದಾಗಿದೆ. ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವುದರೊಂದಿಗೆ ಭಾರತದ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವುದರಲ್ಲಿ ವಕೀಲರ ಪಾತ್ರ ಬಹುದೊಡ್ಡದಾಗಿದೆ. ಸಂವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸಲು ವಕೀಲರು ಅತ್ಯಂತ ಜಾಗರೂಕರಾಗಿ ಕಾರ್ಯನಿರ್ವಹಿಸುವಲ್ಲಿ ಗಮನಹರಿಸಬೇಕೆಂದು ಸಲಹೆ ನೀಡಿದರು. ಜನಸಾಮಾನ್ಯರಿಗೆ ಕಾನೂನಿನ ಅರಿವನ್ನು ಮೂಡಿಸುವುದರೊಂದಿಗೆ, ಸಮಾಜಕ್ಕೆ ಹಾಗೂ ಕಕ್ಷಿದಾರನಿಗೆ ನ್ಯಾಯ ಒದಗಿಸಿ ಕೊಡುವುದರಲ್ಲಿ ವಕೀಲರ ಪಾತ್ರ ತುಂಬಾ ಮುಖ್ಯವಾಗಿರುವಂತದ್ದು.

ಆಡಳಿತ ವ್ಯವಸ್ಥೆಯಾಗಲಿ, ಸಾರ್ವಜನಿಕರ ಬದುಕಾಗಲಿ ಅಥವಾ ರಾಜ್ಯಂಗ, ಕಾರ್ಯಾಂಗದ ಯಾವುದೇ ವಿಷಯ ಬಂದರೂ, ವಕೀಲರ ಸಲಹೆ-ಸೂಚನೆ ಹಾಗೂ ಕೊಡುಗೆ ಬಹುದೊಡ್ಡದಾಗಿದೆ. ನಮ್ಮ ವೃತ್ತಿಯನ್ನು ನಾವು ಗೌರವಿಸಿ ಅದರ ಘನತೆಯನ್ನು ಎತ್ತಿ ಹಿಡಿಯುವ ಕಾರ್ಯದತ್ತ ನಾವೆಲ್ಲರೂ ಬದ್ಧರಾಗೋಣ ಎಂದು ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ವಕೀಲ ಸಹೋದ್ಯೋಗಿಗಳಿಗೆ ಶಾಸಕರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕೊಡವ ವಕೀಲರುಗಳು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.