ವೀರಾಜಪೇಟೆ, ಫೆ. ೨೨: ನಾಣ್ಯ, ನೋಟುಗಳ ಸಂಗ್ರಹದ ಹವ್ಯಾಸವನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಕರೆ ನೀಡಿದರು.
ಪಂಜರಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿವಿಧ ಕಾಲಘಟ್ಟದ ನಾಣ್ಯ ನೋಟುಗಳ ಬೃಹತ್ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಣ್ಯಗಳು ಮೌನವಾಗಿಯೇ ಗತಕಾಲದ ಇತಿಹಾಸವನ್ನು ತಿಳಿಸುತ್ತವೆ. ಈ ನಾಣ್ಯ ಪ್ರದರ್ಶನದಲ್ಲಿ ಅಪರೂಪದ ದೇಶ, ವಿದೇಶಗಳ, ಅರಸರ ಕಾಲದ ವೈವಿಧ್ಯಮಯ ನಾಣ್ಯ ಹಾಗೂ ನೋಟುಗಳಿದ್ದು, ಇವು ನಮ್ಮ ಇತಿಹಾಸದ ಹೆಜ್ಜೆಗಳನ್ನು ನೆನಪಿಸುತ್ತದೆ. ಆಯಾ ಕಾಲದ ಅರಸರ ಆರ್ಥಿಕ, ಧಾರ್ಮಿಕ ಸ್ಥಿತಿಗತಿಗಳನ್ನೂ ಅನಾವರಣ ಮಾಡುತ್ತವೆ. ಸಂಗ್ರಹಕಾರರ ಶ್ರಮ ಈ ಪ್ರದರ್ಶನದಲ್ಲಿ ಕಂಡು ಬರುತ್ತದೆ. ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು. ದುಶ್ಚಟಗಳಿಗೆ ದಾಸರಾಗದೆ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಹಾಗೆಯೇ ಹಿರಿಯರನ್ನು ಗೌರವಿಸುವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ, ಹಳೆಯ ನಾಣ್ಯ, ನೋಟುಗಳ ಸಂಗ್ರಹ ಮಾಡಿ ಗತಕಾಲದ ಇತಿಹಾಸವನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಲು ಕಾರಣಕರ್ತರಾದ ಅಜಯ್ ರಾವ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ನಮ್ಮ ಚರಿತ್ರೆಯ ಮೆಲಕುಹಾಕಲು ಸಾಧ್ಯವಾಗುತ್ತದೆ ಎಂದರು. ನಾಣ್ಯ, ನೋಟುಗಳ ಸಂಗ್ರಹಗಾರರಾದ ಅಜಯ್ ನಾರಾಯಣ ರಾವ್ ಮಾತನಾಡಿ, ಭಾರತವನ್ನು ಅನೇಕ ಅರಸರು, ವಿದೇಶಿ ಆಕ್ರಮಣಕಾರರು ಆಳಿದ್ದಾರೆ. ಅವರ ಕಾಲದ ಆಡಳಿತವನ್ನು ತಿಳಿಯಲು ಆಗಿನ ನಾಣ್ಯ ಮತ್ತು ನೋಟುಗಳು ಸಹಕಾರಿ. ಸಂಗ್ರಹದಲ್ಲಿ ೧೯೬ ದೇಶಗಳ ನಾಣ್ಯ ಮತ್ತು ನೋಟುಗಳಿವೆ. ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿ ಇದರಿಂದ ಇತಿಹಾಸವನ್ನು ಅರಿತುಕೊಳ್ಳಬೇಕು. ಅಲ್ಲದೆ ಜೀವನದ ಪಾಠವನ್ನು ತಿಳಿದುಕೊಂಡು ಸಮಾಜದಲ್ಲಿ ಅರ್ಥಪೂರ್ಣ ಬದುಕನ್ನು ಸಾಗಿಸಬೇಕು. ಎಲ್ಲರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಮಕ್ಕಳಿದ್ದಾಗ ಹಳೆಯ ಕಾಲದ ನಾಣ್ಯಗಳನ್ನು ಡಬ್ಬಗಳಲ್ಲಿ ಸಂಗ್ರಹಿಸುತ್ತಿದ್ದೇವು. ಅವುಗಳ ಮೇಲೆ ನಮಗಿರುವ ಭಾವನೆಗಳು ಮುಖ್ಯವಾಗುತ್ತವೆ. ಇಂದಿನ ಮಕ್ಕಳಲ್ಲಿ ಹಳೆಯ ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸ ಬೆಳೆಸಬೇಕು. ಇಂತಹ ಪ್ರದರ್ಶನದ ಅನುಭವ ಪಡೆದುಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿ ಡಿವೈಎಸ್ಪಿ ಮಹೇಶ್ ಕುಮಾರ್, ನಾಣ್ಯ ಸಂಗ್ರಹಕಾರ ಅಜಯ್ ರಾವ್, ಸಾಹಿತಿ ರಜಿತ ಕಾರ್ಯಪ್ಪ, ಸಮಾಜ ಸೇವಕ ರವಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ನಾಣ್ಯ ನೋಟುಗಳ ಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ದಿಲನ್, ಕವಿತಾ, ಭವ್ಯ, ಪದ್ಮನಾಭ ಟಿ.ಕೆ. ರದೀಶ್ ಕೆ.ಆರ್. ವಿನೋದ್ ಎ.ಎನ್. ಸುದೀಶ್ ಮೋಹನ್, ಆರ್. ಶರವಣ ಕುಮಾರ್, ಮೇಕತಂಡ ಪ್ರವೀಣ್, ಶಶಿಧರ್ ಕೆ.ಆರ್. ಇದ್ದರು.