ಕಣಿವೆ, ಫೆ.೧೬ : ಭಾಷೆ ಮತ್ತು ಸಂವಹನ ಕ್ರಿಯೆಯು ೨೧ನೇ ಶತಮಾನದ ಬಹುದೊಡ್ಡ ಶಕ್ತಿ ಎಂದು ರಾಜ್ಯಶಾಸ್ತç ಉಪನ್ಯಾಸಕ ಸುದರ್ಶನ್ ಕುಮಾರ್ ಎನ್.ಕೆ. ಅವರು ಅಭಿಪ್ರಾಯಿಸಿದರು.
ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳ “ಕನ್ನಡ ಸೌರಭ ಸಂಘ”ದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ ನಿಮಿತ್ತ ಕ್ರಿಯಾಯೋಜನೆ ಸಿದ್ಧಪಡಿಸುವ, ಕೌಶಲ್ಯಾಧಾರಿತ ಕಲಿಕೆಗೆ ಒತ್ತು ಕೊಡುವಂತಹ ವಾತಾವರಣ ನಿರ್ಮಿಸಿ ಕೊಳ್ಳುವುದು, ಹೊಸ ವಿಶ್ವವಿದ್ಯಾಲಯ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಂಡು ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.
ಪ್ರಾಚೀನ ಕಾಲದ ಪ್ರಸಿದ್ಧ ಭಾವಚಿತ್ರಗಳನ್ನು ವಿಭಾಗಕ್ಕೆ ಕೊಡುಗೆ ಯಾಗಿ ನೀಡುವ ಮೂಲಕ ಬಹು ಅರ್ಥಪೂರ್ಣ ವಾಗಿ ಕನ್ನಡ ಸೌರಭ ಸಂಘದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಡಾ. ಸುವರ್ಣ ಕಂಬಿ, ಮಂಜುನಾಥ್, ಮಮತಾ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹರಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಡಾ. ರಮೇಶ್ ಬಿ.ಆರ್ ಮತ್ತು ಡಾ. ಜಮೀರ್ ಅಹಮದ್, ಕನ್ನಡ ವಿಭಾಗದ ಮತ್ತು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಕನ್ನಡ ವಿಭಾಗಕ್ಕೆ ಪ್ರಾಚೀನ ಕವಿಗಳಾದ ಪಂಪ, ಪೊನ್ನ, ರನ್ನ ಮತ್ತು ಜನ್ನರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಿದರು.