ಕುಶಾಲನಗರ, ಫೆ. ೮: ಕುಶಾಲನಗರ ತಾಲೂಕಿನಲ್ಲಿ ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆಗಳ ಉಪವಿಭಾಗ ತೆರೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಣ್ಣೇಗೌಡ ಮನವಿ ಮಾಡಿದರು.
ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ತಾಲೂಕಿನಲ್ಲಿ ನೆಲ್ಲಿಹುದಿಕೇರಿಯಿಂದ ಶಿರಂಗಾಲ ತನಕ ಕಾರ್ಯಯೋಜನೆಗಳ ಒತ್ತಡ ಅಧಿಕವಾಗಿದ್ದು ಪ್ರತ್ಯೇಕ ಕುಶಾಲನಗರ ಉಪವಿಭಾಗ ತೆರೆಯುವ ಅಗತ್ಯತೆ ಇದೆ ಎಂದರು.
ಹಿAದೆ ಹೋಬಳಿ ಕ್ಷೇತ್ರವಾಗಿದ್ದ ಕುಶಾಲನಗರ ಇದೀಗ ಕಳೆದ ಮೂರು ವರ್ಷಗಳ ಹಿಂದೆ ನೂತನ ತಾಲೂಕಾಗಿ ರಚನೆಯಾಗಿದೆ. ಉಪವಿಭಾಗ ಕಚೇರಿಗಳನ್ನು ತೆರೆಯಲು ಕ್ಷೇತ್ರದ ಶಾಸಕರು ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಹೊರ ಭಾಗದ ಗುತ್ತಿಗೆದಾರರು ಕಾಮಗಾರಿ ಟೆಂಡರ್ ಸಂದರ್ಭದಲ್ಲಿ ಹಸ್ತಕ್ಷೇಪ ಮಾಡದೆ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ, ಅವಕಾಶ ನೀಡಬೇಕಾಗಿದೆ ಎಂದು ಅವರು ಹೇಳಿದರು.
ಪ್ರಸಕ್ತ ಗುತ್ತಿಗೆದಾರರು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಸೇರಿ ಕಾಮಗಾರಿ ನಡೆಸಿರುವ ಅಂದಾಜು ರೂ.೨೦೦ ಕೋಟಿ ಅಧಿಕ ಬಿಲ್ ಬಾಕಿ ಇರುವುದಾಗಿ ಅವರು ಮಾಹಿತಿ ನೀಡಿದರು.
ಕುಶಾಲನಗರ ತಾಲೂಕು ಗುತ್ತಿಗೆದಾರರ ಸಂಘದ ಸಭೆ ಇತ್ತೀಚೆಗೆ ನಡೆದು ಅಧ್ಯಕ್ಷರಾಗಿ ಸಣ್ಣೇಗೌಡ, ಗೌರವಾಧ್ಯಕ್ಷರಾಗಿ ಬಿ.ಎಸ್. ಜಗದೀಶ್, ವಿ.ಟಿ. ದಿನೇಶ್, ಕೆ.ಟಿ. ಅರುಣ್ ಕುಮಾರ್, ಉಪಾಧ್ಯಕ್ಷರಾಗಿ ದೊರೆಸ್ವಾಮಿ, ಎಂ.ಆರ್. ಉತ್ತಪ್ಪ, ಕಾರ್ಯದರ್ಶಿಯಾಗಿ ಬಿ.ಸಿ. ಮುರಳಿದರ್, ಸಹ ಕಾರ್ಯದರ್ಶಿಯಾಗಿ ಎಂ.ಸಿ. ಅನಿಲ್ ಕುಮಾರ್, ಖಜಾಂಚಿಯಾಗಿ ಆಲೀಫ್, ಸಂಚಾಲಕರಾಗಿ ಬಿ.ಎಸ್. ಶಶಿಕಿರಣ್ ಮತ್ತು ಸಲಹೆಗಾರರಾಗಿ ಪುರುಷೋತ್ತಮ ರೈ ಆಯ್ಕೆಯಾಗಿದ್ದಾರೆ.
ಸಮಿತಿಗೆ ೧೨ ಮಂದಿ ನಿರ್ದೇಶಕರನ್ನು ನೇಮಿಸಲಾಗಿದೆ ಎಂದು ಸಣ್ಣೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎಂ.ಆರ್ ಉತ್ತಪ್ಪ, ಕಾರ್ಯದರ್ಶಿ ಬಿ.ಸಿ ಮುರುಳಿಧರ್, ಖಜಾಂಚಿ ಅಲೀಫ್, ಸಹ ಕಾರ್ಯದರ್ಶಿ ಎಂ.ಸಿ ಅನಿಲ್ ಕುಮಾರ್, ಸಂಚಾಲಕರಾದ ಬಿ.ಎಸ್ ಶಶಿಕಿರಣ್, ನಿರ್ದೇಶಕರಾದ ಕೆ.ಸಿ ಮಧು ಮತ್ತು ಎಂ.ಈ ಕುಮಾರ್ ಇದ್ದರು.