ನಾಪೋಕ್ಲು, ಜ. ೩೦: ಚೀಯಕಪೂವಂಡ ಕುಟುಂಬದ ವತಿಯಿಂದ ಏಪ್ರಿಲ್ ೨೦೨೬ರಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅಧಿಕ ಸಂಖ್ಯೆಯ ಕೊಡವ ಕುಟುಂಬಗಳು ಪಾಲ್ಗೊಳ್ಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕ್ರೀಡೆ ದಾಖಲಾಗಲು ಪ್ರಯತ್ನಿಸಬೇಕು ಎಂದು ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಸಿ.ಎಂ ಅಪ್ಪಚ್ಚು ಹೇಳಿದರು.

ಇಲ್ಲಿನ ನಾಲ್ನಾಡ್ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾಪೋಕ್ಲುವಿನ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಏಪ್ರಿಲ್ ೨೩ ರಿಂದ ೨೬ರ ವರೆಗೆ ೪ ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟದ ಯಶಸ್ವಿಗಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕ್ರೀಡಾಕೂಟಕ್ಕೆ ಅಂದಾಜು ೬೦ ಲಕ್ಷ ವೆಚ್ಚವಾಗಲಿದ್ದು, ಕುಟುಂಬವಾರು ೨೦,೦೦೦ ರೂ. ಧನ ಸಹಾಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಹಗ್ಗಜಗ್ಗಾಟ ಕ್ರೀಡಾಕೂಟದ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ಹಗ್ಗಜಗ್ಗಾಟ ಕ್ರೀಡಾಕೂಟದ ಯಶಸ್ಸಿಗೆ ಪರಸ್ಪರ ಸರ್ವರ ಸಹಕಾರ ಅಗತ್ಯ. ಜನಾಂಗದ ಕ್ರೀಡಾ ಅಭಿಮಾನಿ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕ್ರೀಡೆ ದಾಖಲಾಗಲು ಸಹಕರಿಸಬೇಕು ಎಂದರು.

ಕ್ರೀಡಾಕೂಟದ ಸಂಚಾಲಕ ಸಿ.ಡಿ ನವೀನ್ ಮಾತನಾಡಿ, ಸ್ಪರ್ಧಾ ವಿಜೇತರಿಗೆ ಅತ್ಯಾಕರ್ಷಕ ವಿತರಿಸಲಾಗುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನ ವಿಜೇತರಿಗೆ ಒಂದು ಲಕ್ಷ ನಗದು ಹಾಗೂ ಟ್ರೋಫಿ ವಿತರಿಸಲಾಗುವುದು ಎಂದರು. ದ್ವಿತೀಯ ಬಹುಮಾನ ೭೫,೦೦೦ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ೫೦ ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ, ಚತುರ್ಥ ಬಹುಮಾನ ನಲವತ್ತು ಸಾವಿರ ಹಾಗೂ ಟ್ರೋಫಿ ಮತ್ತು ೫ನೇ ಬಹುಮಾನವಾಗಿ ೨೦ ಸಾವಿರ ರೂ. ನಗದು ಹಾಗೂ ಟ್ರೋಫಿ ವಿತರಿಸಲಾಗುವುದು ಎಂದರು.

ಹದಿನಾರು ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ವಿಶೇಷ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ೨೦೦೦೦ ಹಾಗೂ ಟ್ರೋಫಿ ವಿತರಿಸಲಾಗುವುದು. ದ್ವಿತೀಯ ಬಹುಮಾನ ವಿಜೇತರಿಗೆ ೧೫೦೦೦ ನಗದು ಹಾಗೂ ಟ್ರೋಫಿ ಮತ್ತು ತೃತೀಯ ಬಹುಮಾನ ವಿಜೇತರಿಗೆ ೧೦,೦೦೦ ನಗದು ಹಾಗೂ ಟ್ರೋಫಿ ವಿತರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಉಪಾಧ್ಯಕ್ಷ ಸಿ.ಎಸ್ ಕಟ್ಟಿ ಮಂಜುನಾಥ್, ಕಾರ್ಯದರ್ಶಿ ಸಿ.ಎ. ನಾಚಪ್ಪ, ಜಂಟಿ ಕಾರ್ಯದರ್ಶಿ ಸಿ.ಪಿ. ಸಚಿನ್ ಮುತ್ತಪ್ಪ, ಖಜಾಂಚಿ ಸಿ.ಎನ್. ಸತೀಶ್ ದೇವಯ್ಯ, ನಿರ್ದೇಶಕರಾದ ಸಿ.ಆರ್. ಸಚಿನ್ ಪೂವಯ್ಯ, ಸಿ.ಎ ಸುನಿಲ್ ಉಪಸ್ಥಿತರಿದ್ದರು.