ಸಿದ್ದಾಪುರ, ನ. ೩೦ : ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿ ಮತ್ತೊಂದು ಹಸುವಿನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಗಾಯಗೊಂಡ ಹಸು ಚಿಂತಾಜನಕ ಸ್ಥಿತಿಯಲ್ಲಿದೆ. ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಮಠ ಎಂಬಲ್ಲಿ ಈ ಘಟನೆ ನಡೆದಿದೆ. ಮಠ ನಿವಾಸಿ ವಿ.ಸಿ. ಚಂದ್ರ ಎಂಬವರಿಗೆ ಸೇರಿದ À ಗಬ್ಬದ ಹಸುವನ್ನು ಮನೆಯ ಬಳಿ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಈ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಬಳಿಕ ಅನತಿ ದೂರದ ತನಕ ಹಸುವನ್ನು ಎಳೆದುಕೊಂಡು ಹೋಗಿ ನಂತರ ಹೊಟ್ಟೆಯಿಂದ ಕರುವನ್ನು ಎಳೆದು ಹಾಕಿ ಹಸುವಿನ ಮಾಂಸವನ್ನು ತಿಂದಿದೆ. ಒಂದು ತಿಂಗಳಲ್ಲಿ ಹಸು ಕರು ಹಾಕಲು ಬಾಕಿ ಇತ್ತು. ಅಷ್ಟರಲ್ಲಿ ಹುಲಿ ದಾಳಿಗೆ ಹಸು ಸಾವನ್ನಪ್ಪಿದೆ. ಇದಲ್ಲದೆ ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿ ವಿಜಯ್ ಕುಮಾರ್ ಎಂಬವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ಹುಲಿ ಅಟ್ಟಾಡಿಸಿಕೊಂಡು ಹೋಗಿ ದಾಳಿ ನಡೆಸಿ ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿದೆ. ಈ ಹಸು ಜೀವನ್ಮರಣ ಸ್ಥಿತಿಯಲ್ಲಿದ್ದು ಇದಕ್ಕೆ ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆಯನ್ನು ನೀಡಿದ್ದಾರೆ. ಮೃತ ಹಸುವಿನ ಮರಣೋತ್ತರ ಪರೀಕ್ಷೆಯನ್ನು ಪಾಲಿಬೆಟ್ಟದ ಪಶು ವೈದ್ಯ ಅಧಿಕಾರಿ ನವೀನ್ ಕುಮಾರ್ ನಡೆಸಿದರು.
ಇತ್ತೀಚಿಗಷ್ಟೇ ಈ ಭಾಗದಲ್ಲಿ ಹುಲಿ ದಾಳಿಯಿಂದ ಹಸುಗಳು ಸಾವನ್ನಪ್ಪಿರುವ ಘಟನೆ ೪ಐದನೇ ಪುಟಕ್ಕೆ (ಮೊದಲ ಪುಟದಿಂದ)
ಮಾಸುವ ಮುನ್ನವೇ ಇದೀಗ ಮತ್ತೆ ಹುಲಿಯ ದಾಳಿ ಮುಂದುವರೆದಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಹುಲಿಯ ಚಲನವಲನವನ್ನು ಕಂಡುಹಿಡಿಯಲು ಕಾರ್ಯಾಚರಣೆ ನಡೆಸಿದರು.
ಹುಲಿ ದಾಳಿಗೆ ನಾಲ್ಕು ಹಸು ಬಲಿ
ಬಾಡಗ ಬಾಣಂಗಾಲ ಗ್ರಾಮದ ಮಠ ನಿವಾಸಿ ವಿ.ಸಿ. ಚಂದ್ರ ಎಂಬವರು ಕಳೆದ ಹಲವು ವರ್ಷಗಳಿಂದ ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಸೇರಿದ ಹಸುಗಳನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿ ೬ ತಿಂಗಳಿನಲ್ಲಿ ೪ ಹಸುಗಳನ್ನು ಕೊಂದಿದೆ. ಇದೀಗ ದಿನಕ್ಕೆ ೧೮ ಲೀಟರ್ ಹಾಲು ಕೊಡುವಂತ ಗಬ್ಬದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಇದರಿಂದಾಗಿ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಚಂದ್ರ ಅವರಿಗೆ ೪ ಹಸುಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ. ನಿರಂತರ ಹುಲಿ ದಾಳಿಯಿಂದಾಗಿ ಹಸುವನ್ನು ಸಾಕಿ ಜೀವನ ಮಾಡಲು ಆತಂಕ ನಿರ್ಮಾಣವಾಗಿದೆ ಎಂದು ಚಂದ್ರ ‘ಶಕ್ತಿ’ಗೆ ತಿಳಿಸಿದರು. ಈ ಭಾಗದಲ್ಲಿ ನಿರಂತರ ಹುಲಿ ದಾಳಿ ನಡೆಯುತ್ತಿದೆ. ಹುಲಿ ನಿರಂತರವಾಗಿ ಸಂಚರಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದರು. ಹಸುವನ್ನು ಕಳೆದುಕೊಂಡಿರುವ ಮಾಲೀಕರಿಗೆ ಕೂಡಲೇ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಕೂಂಬಿAಗ್
ಬಾಡಗ ಬಾಣಂಗಾಲ ಗ್ರಾಮ ವ್ಯಾಪ್ತಿಯ ಮಠ ಭಾಗದಲ್ಲಿ ಹುಲಿ ಹಸುಗಳ ಮೇಲೆ ದಾಳಿ ಹಿನ್ನೆಲೆಯಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ರಾತ್ರಿಯಿಂದಲೇ ಹುಲಿಯ ಚಲನವಲನ ಕಂಡುಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಲಿ ಹಸುವನ್ನು ಕೊಂದುಹಾಕಿದ ಸ್ಥಳದ ಸಮೀಪದ ಸುತ್ತಮುತ್ತಲಿನ ತೋಟದಲ್ಲಿ ಕಾರ್ಯಾಚರಣೆ ನಡೆಸಿದರು. ಹುಲಿಯ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಾತ್ರಿಯಲ್ಲಿ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಸ್ತು ತಿರುಗಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
ವರದಿ : ವಾಸು ಎ.ಎನ್.