ಗೋಣಿಕೊಪ್ಪಲು, ನ. ೨೮: ಬುಡಕಟ್ಟು ಸಮುದಾಯದ ಯುವಕರು ನಾಗರಹೊಳೆ ಅರಣ್ಯ ಪ್ರದೇಶದ ನಾಣಚ್ಚಿ ಗೇಟ್ ಬಳಿ ಕ್ರಿಕೆಟ್ ಪಂದ್ಯಾಟ ನಡೆಸಿರುವ ಬಗ್ಗೆ ಅರಣ್ಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದ ಅರಣ್ಯ ಸಚಿವರ ನಡೆಯನ್ನು ವಿರೋಧಿಸಿ ಪ್ರತಿಭಟನೆಗಿಳಿದ ಆದಿವಾಸಿ ಜನಾಂಗದವರು, ಸಚಿವರು ಕೇಳಿದ ಮಾಹಿತಿಗೆ ಪ್ರತ್ಯುತ್ತರ ಪತ್ರವನ್ನು ಸಲ್ಲಿಸಿದ್ದಾರೆ.
ನಾಗರಹೊಳೆ ಪ್ರವೇಶ ದ್ವಾರದಲ್ಲಿ ಬುಡಕಟ್ಟು ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಗ್ರಾಮಸಭೆ ಒಕ್ಕೂಟ, ಬಾಳೆಕೊವು ಹಾಡಿ ತುಂಡುಮುAಡಗೆ ಕೊಲ್ಲಿ, ಗದ್ದೆಹಾಡಿ, ಬೇಗೂರುಪಾರೆ, ನಾಣಚ್ಚಿ ಗದ್ದೆ ಹಾಡಿ ಗ್ರಾಮ ಸಭೆ ಸದಸ್ಯರುಗಳ ವತಿಯಿಂದ ಪ್ರತಿಭಟನೆ ನಡೆಯಿತು. “ನಮಗೆ ಕ್ರಿಕೆಟ್ ಆಡುವ ಹಕ್ಕು ಇಲ್ಲವೇ” ಎಂದು ಪ್ರಶ್ನಿಸುವ ಮೂಲಕ ಬುಡಕಟ್ಟು ಸಮುದಾಯದವರು ನಮ್ಮ ಬದುಕಿನ ಹಕ್ಕಿಗಾಗಿ ಹೋರಾಡುತ್ತಿರುವ ಸ್ಥಿತಿಯ ಬಗ್ಗೆ ಪ್ರತಿಭಟನೆಯಲ್ಲಿ ಮನವರಿಕೆ ಮಾಡಿಕೊಡಲು ಮುಂದಾದರು.
“ನಾಗರಹೊಳೆ ಗೇಟಿನಲ್ಲಿ ಕ್ರಿಕೆಟ್ ಆಡಲು ದೊಡ್ಡ ಪ್ರಮಾಣದ ಮರಗಳ ಹನನ ನಡೆದಿದೆ ಎಂದು ಪರಿಸರವಾದಿಗಳು ದೂರು ನೀಡಿದ್ದಾರೆ. ಇದನ್ನೇ ನಂಬಿಕೊAಡ ಸಚಿವರು ಬುಡಕಟ್ಟು ಸಮುದಾಯದವರ ಹಕ್ಕಿನ ಮೇಲೆ ಚ್ಯುತಿ ಬರುವಂತೆ ವರ್ತಿಸಿರುವುದು ಖಂಡನೀಯ. ತಲತಲಾಂತರಗಳಿAದ ಕಾಡಿನಲ್ಲಿ ವಾಸಿಸುತ್ತ ಈ ನೆಲದ ಜೈವಿಕ ವಿವಿಧತೆಯನ್ನು ಕಾಪಾಡಿಕೊಳ್ಳುತ್ತಿರುವ ಮತ್ತು ವನ್ಯ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ, ಪರಿಸರವನ್ನೇ ದೇವರುಗಳು ಎಂದು ಪೂಜಿಸುವ ಬುಡಕಟ್ಟು ಜನರ ನಡೆಯ ಬಗ್ಗೆ ಪ್ರಶ್ನೆ ಮಾಡಿರುವುದು ಕಾಳಜಿ ಸರ್ಕಾರದ ಲಕ್ಷಣವಲ್ಲ ಎಂದು ದೂರಿದರು. “ನಾಗರಹೊಳೆ ಪ್ರದೇಶದಲ್ಲಿ ರೆಸಾರ್ಟ್ ನಡೆಸಲು ಮುಂದಾದಾಗ ಅದನ್ನು ವಿರೋಧಿಸಿ ಹೋರಾಟ ನಡೆಸಿದವರು ಬುಡಕಟ್ಟು ಸಮುದಾಯದವರು. ನಾವುಗಳು ಪವಿತ್ರವೆಂದು ಪರಿಗಣಿಸುವ ಹುಲಿ, ಆನೆ, ಕರಡಿ, ನವಿಲು, ಕಾಡುನಾಯಿ ಹಾಗೂ ಇನ್ನಿತರ ಅನೇಕ ವನ್ಯಪ್ರಾಣಿಗಳು ಪ್ರವಾಸೋದ್ಯಮದ ಪ್ರದರ್ಶನವಾಗಬಾರದು ಎಂಬ ಉದ್ದೇಶದೊಂದಿಗೆ ಸರ್ಕಾರ ನಾಗರಹೊಳೆಯನ್ನ ಪ್ರವಾಸೋದ್ಯಮಕ್ಕೆ ಉತ್ತೇಜಿಸುವ ವಿರುದ್ಧ ಧ್ವನಿ ಎತ್ತಿದವರು ನಾವು. ಹೀಗೆ ಕಾಡಿನಲ್ಲಿ ಬದುಕು ಕಂಡುಕೊAಡ ಜನಾಂಗದ ಮೇಲೆ ಹಕ್ಕಿನ ವಿಚಾರವಾಗಿ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ. ನಮ್ಮನ್ನ ಕಾಡಿನಿಂದ ಸ್ಥಳಾಂತರಿಸಲು ಈ ರೀತಿಯ ಹುನ್ನಾರಗಳು ಸದಾ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
“ಬುಡಕಟ್ಟು ಸಮುದಾಯದವರು ಅವರ ಸಂಸ್ಕೃತಿ ಮತ್ತು ಕ್ರೀಡೆಗಳ ಬಗ್ಗೆ ಕೇಂದ್ರೀಕೃತವಾಗಬಾರದು ಎಂದು ಹೇಳುವ ನೀವು ಅವರ ಬದುಕಿನ ದೌರ್ಜನ್ಯಗಳ ಬಗ್ಗೆ ಗಮನ ಹರಿಸಿದ್ದೀರಾ. ಕೂಲಿ ಕಾರ್ಮಿಕರಾಗಿ ಇಂದು ಶೋಷಿತರಾಗುತ್ತಿರುವ ವಿಚಾರ ನಿಮಗೆ ತಿಳಿದಿದೆಯೇ ಎಂದು ಸಚಿವರನ್ನು ಪ್ರಶ್ನೆ ಮಾಡಿದರು. ‘ಬಿರ್ಸಾಮುಂಡಾ’ ಅವರ ೧೫೦ನೇ ಜಯಂತಿ ಆಚರಣೆಯ ಸಂದರ್ಭ ವಿವಿಧ ಹಾಡಿಗಳಲ್ಲಿ ವಾಸಿಸುವ ಯುವಕರು ಮಕ್ಕಳಿಗಾಗಿ ಕ್ರಿಕೆಟ್ ಪಂದ್ಯವನ್ನು ಆಚರಣೆಯ ಭಾಗವಾಗಿ ಆಯೋಜಿಸಲಾಗಿತ್ತು. ಮೂಲ ನಿವಾಸಿ ಸಮುದಾಯದ ನಾಯಕರಾಗಿರುವ ಬಿರ್ಸಾಮುಂಡಾರವರು ತಮ್ಮ ನೆಲ, ಕಾಡು, ಜಮೀನ್ದಾರ್, ಭೂಮಾಲೀಕ, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ತಿಳಿಸುವ ಮಾರ್ಗವಾಗಿದ್ದು, ಅರಣ್ಯ ನಾಶದ ಕಾರಣವಾಗಿರಲಿಲ್ಲ ಎಂದು ತಿಳಿಸಿದರು.
ಕ್ರಿಕೆಟ್ ಆಡುವ ನೆಪದಲ್ಲಿ ಕಾಡು ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆದಿಲ್ಲ ಇದು ಸುಳ್ಳು ಸುದ್ದಿಯಾಗಿದೆ. ಬಾಳೆಕೋವು ಹಾಡಿಯ ಮುಂಭಾಗದ ಸ್ಥಳದಲ್ಲಿ ಪಂದ್ಯಾಟ ಆಯೋಜಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ನಾವು ಕ್ರಿಕೆಟ್ ಆಡುವ ಸಂದರ್ಭ ನಮ್ಮ ಅನುಮತಿ ಪಡೆಯದೆ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಾಳೆಕೋವು ಹಾಡಿ ಗ್ರಾಮ ಸಭೆಯ ಅಧ್ಯಕ್ಷ ಕಾಳಾ ಬಿ.ಸಿ, ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ ಗ್ರಾಮ ಸಭೆಗಳ ಒಕ್ಕೂಟ ಅಧ್ಯಕ್ಷ, ತಿಮ್ಮ ಜೆ.ಕೆ, ಬೇಗೂರು ಪಾರೆ ನಾಣಚ್ಚಿ ಗದ್ದೆ ಹಾಡಿ ಗ್ರಾಮ ಸಭೆ ಮುಖ್ಯಸ್ಥ ರಾಮಕೃಷ್ಣ ಜೆ.ಎಸ್, ಬೇಗೂರು ಪಾರೆ ನಾಣಚ್ಚಿ ಗದ್ದೆ ಹಾಡಿ ಗ್ರಾಮ ಸಭೆ ಅಧ್ಯಕ್ಷ ಗಣಪತಿ ಜೆ.ಕೆ, ತುಂಡು ಮನು ಜೆ.ಬಿ, ನಾಗರಹೊಳೆ ಅರಣ್ಯವಾಸಿಗಳು ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.