ಕಣಿವೆ, ನ. ೨೩: ಕೊಡಗು ಜಿಲ್ಲೆಯಲ್ಲಿರುವ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಸಂಸದ ಯದುವೀರ್ ಒಡೆಯರ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಯಿತು.

ಕೊಡಗು ಜಿಲ್ಲೆಯಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚಿನ ಮಂದಿ ಅರೆಸೇನಾ ಪಡೆಯಲ್ಲಿ ಕರ್ತವ್ಯದಲ್ಲಿರುವ ಹಾಗೂ ನಿವೃತ್ತರಾಗಿರುವ ಯೋಧರಿದ್ದಾರೆ.

ಬಹಳಷ್ಟು ಮಂದಿ ವಿಧವೆಯರು ಕೂಡ ಇದ್ದು, ಸರ್ಕಾರದ ಸವಲತ್ತುಗಳು ಸಿಗದೇ ವಂಚಿತರಾಗಿದ್ದಾರೆ. ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಗೆ ಅರೆಸೇನಾಪಡೆಯ ಯೋಧರನ್ನು ಪರಿಗಣಿಸಬೇಕು. ಅಥವಾ ಅರೆಸೇನಾಪಡೆಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಅರೆಸೇನಾಪಡೆ ಯೋಧರ ಕುಟುಂಬಗಳಿಗೆ ನೆರವು ನೀಡಬೇಕು.

ಈಗಾಗಲೇ ಸ್ವಾಧೀನದಲ್ಲಿರುವ ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ ೧೦/೨ ರಲ್ಲಿನ ೦.೨೦ ಸೆಂಟು ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಬೇಕು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಿಜಿಹೆಚ್‌ಎಸ್ ವೆಲ್ ನೆಸ್ ಸೆಂಟರ್ ತೆರೆಯಬೇಕು. ಅಥವಾ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಇರುವ ಇಸಿಹೆಚ್‌ಎಸ್ ಆರೋಗ್ಯ ಕೇಂದ್ರದಲ್ಲಿ ಅರೆಸೇನಾಪಡೆಯ ನಿವೃತ್ತ ಯೋಧರಿಗೂ ಸೌಲಭ್ಯ ಸಿಗುವಂತೆ ಕ್ರಮಕೈಗೊಳ್ಳಬೇಕು ಸೇರಿದಂತೆ ಇನ್ನಿತರ ಸೌಲಭ್ಯಗಳಿಗಾಗಿ ಸಂಸದರನ್ನು ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟ ಒತ್ತಾಯಿಸಿತು.

ನಿವೃತ್ತ ಯೋಧರ ಒಕ್ಕೂಟದಿಂದ ಮನವಿ ಸ್ವೀಕರಿಸಿದ ಸಂಸದರು ಮಾತನಾಡಿ, ಈ ಬಗ್ಗೆ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯ ಮಾಡಲಾಗುತ್ತದೆ ಹಾಗೂ ಕೇಂದ್ರ ಸರ್ಕಾರದಿಂದಲೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಎಂ.ಜಿ. ಯತೀಶ್, ಉಪಾಧ್ಯಕ್ಷ ಪುಲಿಯಂಡ ಎಂ. ಚಂಗಪ್ಪ, ಸಂಚಾಲಕರಾದ ನೂರೇರಾ ಎಂ. ಭೀಮಯ್ಯ, ಕಾರ್ಯದರ್ಶಿ ಬಿ.ಎನ್. ರವೀಂದ್ರ, ನಿರ್ದೇಶಕರಾದ ಜಿ.ಕೆ. ದಿನೇಶ್‌ಕುಮಾರ್, ರಾಜಶೇಖರ್, ಎಂ.ಎನ್. ಗೋಪಾಲಕೃಷ್ಣ, ಮನೋಹರ್ ಇದ್ದರು.