ಸೋಮವಾರಪೇಟೆ, ನ. ೧೮: ವಿದ್ಯಾರ್ಥಿಗಳು ಪ್ರವಾಸದ ಸಂದರ್ಭದಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಅವುಗಳ ಇತಿಹಾಸ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಪ್ರಾಚ್ಯ ಪ್ರಜ್ಞೆ ಬೆಳೆಸಿಕೊಂಡು ಸ್ಮಾರಕಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ. ಮಂಜೇಶ್ ಹೇಳಿದರು. ಕರ್ನಾಟಕ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾಚ್ಯ ಪ್ರಜ್ಞೆ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚೀನ ಕಾಲದ ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಾಚ್ಯ ವಸ್ತು ಸ್ಮಾರಕಗಳು, ಸಂಗ್ರಹಾಲಯಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಂಜೇಶ್ ಹೇಳಿದರು. ಪ್ರಾಚೀನ ಸಂಗ್ರಹಾಲಯಗಳ ಮಹತ್ವದ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಭಾರತದ ಇತಿಹಾಸ ಪ್ರತಿಬಿಂಬಿಸುವ ಸ್ಮಾರಕಗಳು ನಮ್ಮ ನಾಗರಿಕತೆಯ ಪ್ರಖ್ಯಾತ ಚಿಹ್ನೆಗಳಾಗಿವೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಪ್ರಾಚೀನ ಸ್ಮಾರಕಗಳು, ಶಿಲ್ಪಕಲೆಗಳು, ವಾಸ್ತುಶಿಲ್ಪ ಹಾಗೂ ಪರಂಪರೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಿವೆ ಎಂದರು. ನೋಡಲ್ ಅಧಿಕಾರಿ ಎಸ್.ಎಸ್. ಶಿವಕುಮಾರ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಟಿ.ವಿ. ಶೈಲಾ, ಮಾದಾಪುರ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಪಾಲಾಕ್ಷ, ಶಿಕ್ಷಣ ಸಂಯೋಜಕಿ ಎಸ್.ಬಿ. ಯಾದಕುಮಾರಿ, ಸಿ.ಆರ್.ಪಿ.ಗಳಾದ ವಿ. ಪ್ರೇಮ, ಡಿ.ಆರ್. ಗಿರೀಶ್, ಎಂ.ಎನ್. ಚೈತ್ರ, ಸಂಪನ್ಮೂಲ ಶಿಕ್ಷಕ ಡಿ. ವಿಜಯ್ ಕುಮಾರ್, ಬಿಪಿನ್ ಕುಮಾರ್ ಹಾಗೂ ಆರ್. ದಿವಾಕರ್ ಇದ್ದರು. ವಿದ್ಯಾರ್ಥಿಗಳಿಗೆ ಪ್ರಾಚ್ಯ ಪ್ರಜ್ಞೆ ಕುರಿತು ಪ್ರಬಂಧ, ಭಾಷಣ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.