ಶ್ರೀಮಂಗಲ, ನ. ೧೮: ಕುಟ್ಟ ಕೊಡವ ಸಮಾಜದ ಅಂಗ ಸಂಸ್ಥೆಯಾದ ಪೊಮ್ಮಕ್ಕಡ ಕೂಟದ ಮೊದಲ ಮಹಾಸಭೆ ಕೂಟದ ಅಧ್ಯಕ್ಷೆ ಮುಕ್ಕಾಟಿರ ಅರ್ಚನಾ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಕುಟ್ಟ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟ ಮತ್ತು ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಬೈಲಾ ಹಾಗೂ ನಿಯಮಗಳಂತೆ ಕೂಟವನ್ನು ಮುನ್ನಡೆಸುವಂತೆ ಹಾಗೂ ಕೊಡವ ಸಾಂಸ್ಕೃತಿಕ ಹಿರಿಮೆ ಸಂರಕ್ಷಣೆ ಮತ್ತು ಬೆಳವಣಿಗೆಗೆ ಕೂಟದಿಂದ ಕೊಡುಗೆ ನೀಡುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಕ್ಕಾಟಿರ ಅರ್ಚನಾ ಮಾದಪ್ಪ ಅವರು, ನಮ್ಮೆಲ್ಲರಿಗೂ ನಮ್ಮಲ್ಲಿರುವ ಕಲೆ ಪ್ರತಿಭೆಗಳನ್ನು ಮಕ್ಕಳಲ್ಲಿ ಇರುವಂತೆ ಹೊರ ತರಲು ಪೊಮ್ಮಕ್ಕಡ ಕೂಟ ವೇದಿಕೆಯಾಗಿದ್ದು, ಎಲ್ಲರೂ ಒಗ್ಗಟ್ಟು ಹಾಗೂ ಸಹಕಾರ ಮನೋಭಾವದಿಂದ ಈ ಕೂಟವನ್ನು ಬಳಸಿಕೊಂಡು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಮುಂದಿನ ಎಲ್ಲಾ ಕಾರ್ಯ ಚಟುವಟಿಕೆಗೆ ಎಲ್ಲರೂ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕಾಳಮಾಡ ನೀತು ಅಪ್ಪಣ್ಣ ಪ್ರಾರ್ಥಿಸಿ, ಕೂಟದ ಜಂಟಿ ಕಾರ್ಯದರ್ಶಿ ಪಟ್ರಪಂಡ ಸಾಂಜ್ ಕರುಂಬಯ್ಯ ಸ್ವಾಗತಿಸಿ, ತೀತಿರ ಜ್ಯೋತಿ ಕುಶಾಲಪ್ಪ ವಾರ್ಷಿಕ ವರದಿ ಮಂಡಿಸಿ, ಖಜಾಂಚಿ ತೀತಿರ ರೇನಾ ಕಾರ್ಯಪ್ಪ ಲೆಕ್ಕಪತ್ರ ಮಂಡಿಸಿ, ಉಪಾಧ್ಯಕ್ಷೆ ಚೆಪ್ಪುಡಿರ ಚೇತನಾ ಬೋಪಣ್ಣ ವಂದಿಸಿದರು.
ವೇದಿಕೆಯಲ್ಲಿ ತೀತಿರ ಬೃಂದಾ ಕಾರ್ಯಪ್ಪ, ಕೈಬುಲಿರ ಪ್ರೀತಿ ನಂಜಪ್ಪ, ಬಾಚಣಿಯಂಡ ಬೀನಾ ಪ್ರಕಾಶ್, ಕೂಟದ ಸಲಹೆಗಾರ್ತಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಕುಟ್ಟ ಕೊಡವ ಸಮಾಜದ ಕಾರ್ಯದರ್ಶಿ ಕೊಂಗAಡ ಸುರೇಶ್ ಉಪಸ್ಥಿತರಿದ್ದರು.