ಮಡಿಕೇರಿ, ನ. ೧೮: ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ವತಿಯಿಂದ ಕೊಡಗಿನ ಮೂವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಸರಗೋಡುವಿನ ನುಳ್ಳಿಪಾಡಿ ಯಲ್ಲಿ ನಡೆದ ಗಡಿನಾಡು ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಸಂಘಟನೆ ಮತ್ತು ಸಾಹಿತ್ಯ ಕ್ಷೇತ್ರ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ರುಬೀನಾ ಎಂ.ಎ ಅವರಿಗೆ ಸಾಹಿತ್ಯ ಕ್ಷೇತ್ರ ಹಾಗೂ ವಿಶ್ವ ಕುಂಬೂರು ಅವರಿಗೆ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕಾಸರಗೋಡು ಕನ್ನಡ ಭವನ ರಜತ ಮಹೋತ್ಸವ ಸಂಭ್ರಮ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-೨೦೨೫ ನೀಡಿ ಗೌರವಿಸಲಾಯಿತು.

ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕಾಧ್ಯಕ್ಷ ಡಾ.ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಕೋಲಾರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ಹಾಗೂ ಸ್ವರ್ಣಭೂಮಿ ಫೌಂಡೇಶನ್‌ನ ಪ್ರಮುಖರಾದ ಬಿ.ಶಿವಕುಮಾರ್ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಕೋಲಾರ ಘಟಕದ ಅಧ್ಯಕ್ಷರು, ಸಾಹಿತಿಗಳು, ಸ್ಥಳೀಯ ಕನ್ನಡ ಭಾಷಾ ಪ್ರೇಮಿಗಳು, ಕನ್ನಡ ಭವನದ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕರುಗಳಾದ ಲೋಹಿತ್ ಮಾಗಲುಮನೆ, ಲೋಕೇಶ್ ಕಾಟಕೇರಿ, ರಿಷಾ, ಅರುಣ್ ಕುಮಾರ್ ಪಿ. ಮತ್ತಿತರರು ಹಾಜರಿದ್ದರು.