ಮಡಿಕೇರಿ, ನ. ೧೧: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ೫ ದಶಕಗಳ ಸಾರ್ಥಕ ಸೇವೆ ಸ್ಮರಣೀಯವಾಗಿದೆ ಎಂದು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಶ್ಲಾಘಿಸಿದರು.

ನಗರದ ಕೊಡವ ಸಮಾಜದಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶಬರಿ ಕಡಿದಾಳ್, ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿ ವ್ಯಾಪ್ತಿಯಲ್ಲಿ ೫೦ ವರ್ಷಗಳಿಂದ ಸೇವಾ ಕಾರ್ಯ ಹಮ್ಮಿಕೊಳ್ಳುವ ಮೂಲಕ ಜನಸೇವೆಯಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿರುವುದು ಸಂತೋಷದ ವಿಚಾರ. ಜನರಿಗೆ ಈ ಸೇವಾ ಕಾರ್ಯಗಳ ನಿಜವಾದ ಪ್ರಯೋಜನ ತಲುಪಿದಾಗ ಸೇವೆಗೆ ನಿಜವಾದ ಸಾರ್ಥಕತೆ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇನ್ನರ್ ವೀಲ್ ಸಂಸ್ಥೆಯು ಮತ್ತಷ್ಟು ಸೇವಾ ಯೋಜನೆ ಹಮ್ಮಿಕೊಳ್ಳಲು ಸುವರ್ಣ ಸಂಭ್ರಮ ಕಾರ್ಯಕ್ರಮ ಸಹಾಯಕವಾಗಲಿ ಎಂದೂ ಅವರು ಹಾರೈಸಿದರು

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯನ್ನು ೫೦ ವರ್ಷಗಳ ಹಿಂದೆ ಸ್ಥಾಪಿಸಿದ್ದ ಡಾ. ಜಯಲಕ್ಷಿö್ಮ ಪಾಟ್ಕರ್ ಅವರು ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿ, ಯಾವುದೇ ಸಂಸ್ಥೆ ೫೦ ವರ್ಷಗಳನ್ನು ಪೂರೈಸುವುದು ಸುಲಭಸಾಧ್ಯವಲ್ಲ. ಹೀಗಿರುವಾಗ ಅನೇಕ ಸವಾಲುಗಳನ್ನು ಎದುರಿಸಿ ಮಹಿಳೆಯರೇ ಸದಸ್ಯರಾಗಿರುವ ಮಡಿಕೇರಿ ಇನ್ನರ್ ವೀಲ್ ೫ ಸಾರ್ಥಕ ದಶಕಗಳನ್ನ ಪೂರೈಸಿದ್ದು ಸ್ಥಾಪಕಾಧ್ಯಕ್ಷೆಯಾಗಿ ತನ್ನಲ್ಲಿ ಸಾರ್ಥಕ ಭಾವ ಮೂಡಿಸಿದೆ ಎಂದು ಹೆಮ್ಮೆಯಿಂದ ನುಡಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಲಲಿತಾರಾಘವನ್ ಅವರಿಗೆ ಗೋಲ್ಟನ್ ಕಾಲರ್ ನೀಡಿ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಗೌರವಿಸಿದರು. ಇನ್ನರ್ ವೀಲ್ ಜಿಲ್ಲೆಯ ಮಾಜಿ ಅಧ್ಯಕ್ಷೆ ಪೂರ್ಣಿಮಾ ರವಿ, ಸೇರಿದಂತೆ ಜಿಲ್ಲೆಯ ಅನೇಕ ಮಾಜಿ ಅಧ್ಯಕ್ಷೆಯರು ಹಾಜರಿದ್ದು ಸುವರ್ಣ ಮಹೋತ್ಸವ ಅಂಗವಾಗಿ ೫೦ ದೀಪಗಳನ್ನು ಬೆಳಗಿಸಿದರು. ಶಫಾಲಿ ರೈ ಸಂಪಾದಕತ್ವದಲ್ಲಿ ಪ್ರಕಟಿತ ವಾರ್ತಾ ಸಂಚಿಕೆ ಗಿರಿಶೃಂಗವನ್ನು ಈ ಸಂದರ್ಭ ಲೋಕಾರ್ಪಣೆಗೊಳಿಸಲಾಯಿತು.

ಇನ್ನರ್ ವೀಲ್ ಕಾರ್ಯದರ್ಶಿ ನಮಿತಾ ರೈ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷೆ ಲತಾ ಚಂಗಪ್ಪ, ಕಾರ್ಯದರ್ಶಿ ಶಫಾಲಿ ರೈ ವೇದಿಕೆಯಲ್ಲಿದ್ದರು. ಲಲಿತಾ ರಾಘವನ್ ಸ್ವಾಗತಿಸಿ, ರಶ್ಮಿ ಪ್ರವೀಣ್ ವಂದಿಸಿದ ಕಾರ್ಯಕ್ರಮವನ್ನು ದಿವ್ಯಾಮುತ್ತಣ್ಣ ನಿರೂಪಿಸಿದರು. ಡಾ. ರೇಣುಕಾ ಸುಧಾಕರ್, ವಿಜಯಲಕ್ಷಿö್ಮ ಚೇತನ್ ಪ್ರಾರ್ಥಿಸಿ, ನಮೃತಾ ವಿಕಾಸ್, ಅಗ್ನೇಸ್ ಮುತ್ತಣ್ಣ, ಮೃಣಾಲಿನಿ ಚಿಣ್ಣಪ್ಪ, ಬೊಳ್ಳು ಮೇದಪ್ಪ, ಶಮ್ಮಿ ಮೋಹನ್ ಪ್ರಭು ಸಭೆಯ ವಿವಿಧ ಹಂತಗಳನ್ನು ನಿರ್ವಹಿಸಿದರು. ಸುವರ್ಣ ಸಂಭ್ರಮದ ಪ್ರಯುಕ್ತ ಇನ್ನರ್ ವೀಲ್ ಸದಸ್ಯೆಯರಿಂದ ಆಕರ್ಷಕ ಮನೋರಂಜನಾ ಕಾರ್ಯಕ್ರಮಗಳು ಮನಸೆಳೆದವು.