ಕಣಿವೆ, ನ. ೪: ಕೊಡ್ಲಿಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಬೆಸೂರು ಗ್ರಾಮದ ೭೭ ರ ಪ್ರಾಯದ ಎ.ಎಂ.ರಾಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

೧೯೮೩ ರಿಂದಲೂ ಸತತವಾಗಿ ಸಹಕಾರ ಸಂಘದ ನಿರ್ದೇಶಕರಾಗಿ ಆರಿಸುತ್ತಲೇ ಬಂದಿರುವ ರಾಜಮ್ಮ, ಈ ಹಿಂದಿನ ಎರಡು ಅವಧಿಯಲ್ಲಿ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಘದ ಅಭಿವೃದ್ದಿಗೆ ವಿಶೇಷವಾದ ಶ್ರಮ ಹಾಕಿದ್ದರು. ಮೂಲತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ರಾಜಮ್ಮ ಮಾಜಿ ಸಚಿವ ಬಿ.ಎ.ಜೀವಿಜಯ ಅವರ ಬೆಂಬಲಿಗರಾಗಿದ್ದು ಅವರೊಂದಿಗೆ ಜೆಡಿಎಸ್ ಪಕ್ಷಕ್ಕೆ ಬಂದವರು ಇದೀಗ ಜೆಡಿಎಸ್ ನಲ್ಲೇ ಮುಂದುವರೆದಿದ್ದಾರೆ.

ಪ್ರಸಕ್ತ ಹುಣಸೂರು ಲೋಕೋಪಯೋಗಿ ಇಲಾಖೆಯಲ್ಲಿ ಲೆಕ್ಕಪತ್ರ ಅಧಿಕಾರಿಯಾಗಿರುವ ಶ್ರೀಧರ್ ಅವರ ತಾಯಿಯಾಗಿರುವ ರಾಜಮ್ಮ, ಈ ಹಿಂದೆ ಬೆಸೂರು ಗ್ರಾ.ಪಂ. ಚುನಾವಣೆಯಲ್ಲೂ ಸ್ಪರ್ಧಿಸಿ ಸಮಬಲದ ಮತ ಪಡೆದು ಲಾಟರಿ ಆಯ್ಕೆಯಲ್ಲಿ ಸೋಲು ಒಪ್ಪಿದ್ದ ರಾಜಮ್ಮ ೭೭ ರ ಪ್ರಾಯದಲ್ಲೂ ಸಹಕಾರ ಸಂಘದಲ್ಲಿ ಸಕ್ರಿಯರಾಗಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂಬುದು ಗ್ರಾಮಸ್ಥರ ಅಂಬೋಣ.