ಮಡಿಕೇರಿ, ನ. ೪: ರೋಟರಿ ವುಡ್ಸ್ ವತಿಯಿಂದ ಮಡಿಕೇರಿಯ ಕೊಡಗು ಶಿಶುಕಲ್ಯಾಣ ಸಂಸ್ಥೆಗೆ ೬ ಸಿಸಿ ಕ್ಯಾಮರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಶಿಶುಕಲ್ಯಾಣ ಸಂಸ್ಥೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಅವರು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಅವರಿಂದ ಸಿಸಿ ಕ್ಯಾಮರಗಳನ್ನು ಸ್ವೀಕರಿಸಿದರು.

ಈ ಸಂದರ್ಭ ಮಾತನಾಡಿದ ಕಿರಣ್ ಕುಂದರ್, ಅಬುದಾಬಿ, ದುಬೈನಲ್ಲಿ ಸಕ್ರಿಯವಾಗಿರುವ ಅರೆಭಾಷೆ ಗೌಡ ಕುಟುಂಬಗಳು ಕರ್ಣಯ್ಯನ ಸುನೀಲ್ ಮೂಲಕ ರೋಟರಿ ವುಡ್ಸ್ ಸಹಯೋಗದಲ್ಲಿ ಶಿಶುಕಲ್ಯಾಣ ಸಂಸ್ಥೆಗೆ ಸಿಸಿ ಕ್ಯಾಮರಗಳನ್ನು ನೀಡಿದ್ದಾಗಿ ಮಾಹಿತಿ ನೀಡಿದರು.

ರೋಟರಿ ಜಿಲ್ಲೆ ೩೧೮೧ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ದಾನಿಗಳು ನೀಡುವ ದಾನ ಅಗತ್ಯವುಳ್ಳವರಿಗೆ ದೊರಕಬೇಕು. ದಾನ ಯಾರಿಂದ ಯಾರಿಗ ನೀಡಲ್ಪಡುತ್ತದೆ ಎಂಬುದು ಕೂಡ ಇಂದಿನ ದಿನಗಳಲ್ಲಿ ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಪರದೇಶದಲ್ಲಿದ್ದರೂ ಕೊಡಗಿನ ಮೇಲಿನ ಅಭಿಮಾನದಿಂದ ಸಿಸಿ ಕ್ಯಾಮರದ ಅಗತ್ಯತೆ ಮನಗಂಡು ಶಿಶುಕಲ್ಯಾಣ ಸಂಸ್ಥೆಗೆ ಕೊಡುಗೆ ನೀಡಿದ ದಾನಿಗಳ ಮನೋಭಾವ ಶ್ಲಾಘನೀಯವಾದದ್ದು ಎಂದರು.

ರೋಟರಿ ವುಡ್ಸ್ ಸಾಮಾಜಿಕ ಕಳಕಳಿಯೊಂದಿಗೆ ಸಾಕಷ್ಟು ಕಾರ್ಯಯೋಜನೆ ಹಮ್ಮಿಕೊಂಡಿದ್ದು, ಸಿಸಿ ಕ್ಯಾಮರ ಕೊಡುಗೆಗೆ ಸಂಸ್ಥೆ ಅಬಾರಿಯಾಗಿದೆ ಎಂದು ಶಿಶುಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಹೇಳಿದರು.

ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ನಿರ್ದೇಶಕರಾದ ವಸಂತ್ ಕುಮಾರ್, ಭಗತ್ ರಾಜ್, ಎ. ಲೋಕೇಶ್, ರವಿಕುಮಾರ್, ಪವನ್, ರಾಧಾಮಣಿ, ಲೀಲಾವತಿ, ಮನೋಹರ್, ಪ್ರವೀಣ್, ರವೀಂದ್ರ, ಮುಂತಾದವರು ಹಾಜರಿದ್ದರು.