ಸೋಮವಾರಪೇಟೆ, ಅ. ೩: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಯಿಂದ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ವಿದ್ಯೆಯೇ ನಮ್ಮನ್ನು ಉನ್ನತ ಸ್ಥಾನಕ್ಕೆ ತಲುಪಿಸುತ್ತದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೊಠಡಿಗಳನ್ನು ಉದ್ಘಾಟಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯೆ ಎಂಬುದು ಅಪೂರ್ವ ಸಂಪತ್ತು. ವಿದ್ಯಾದಾನ ಮಹಾನ್ ಕಾರ್ಯ. ಕಲಿತ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ರ್ಯಾಂಕ್ಗಳನ್ನು ಗ್ರಾಮೀಣ ಮಕ್ಕಳು ಪಡೆಯುತ್ತಿರುವುದು ಶ್ಲಾಘನೀಯ. ಮಕ್ಕಳ ಕಲಿಕೆಗೆ ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡುವುದು ಜವಾಬ್ದಾರಿ. ಓದು ಮುಂದುವರಿಸಲು ಕಷ್ಟವಾದ ಕುಟುಂಬಗಳಿದ್ದರೆ ಅಂತವರಿಗೆ ತಾನೂ ಸಹ ಸಹಕಾರ ನೀಡುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲೇಬೇಕೆಂಬ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘದವರು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಹೆಸರಿನಲ್ಲಿ ಆಂಗ್ಲಮಾಧ್ಯಮದಲ್ಲಿ ಶಾಲಾ, ಕಾಲೇಜು ತೆರೆದು, ವಿದ್ಯಾದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ೨೦೦೫ನೇ ಇಸವಿಯಲ್ಲಿ ಎಲ್ಕೆಜಿಯಿಂದ ಪ್ರಾರಂಭವಾದ ವಿದ್ಯಾಸಂಸ್ಥೆ ಇಂದು ದೊಡ್ಡದಾಗಿ ಬೆಳೆದಿದೆ. ಕಳೆದ ೯ ವರ್ಷಗಳಿಂದ ಪ್ರತಿ ವರ್ಷ ಎಸ್ಎಸ್ಎಲ್ಸಿಯಲ್ಲಿ ಶೇ. ೧೦೦ರಷ್ಟು ಫಲಿತಾಂಶ ಪಡೆಯಲಾಗಿದೆ. ಪ್ರಸಕ್ತ ವರ್ಷ ಜಿಲ್ಲಾ ಮಟ್ಟದಲ್ಲಿ ಮೂರು ರ್ಯಾಂಕ್ಗಳು ಕುವೆಂಪು ವಿದ್ಯಾಸಂಸ್ಥೆಗೆ ಸಿಕ್ಕಿದೆ. ಪಿಯುಸಿ ವಿಭಾಗದ ವಿಜ್ಞಾನ ವಿಭಾಗದಲ್ಲೂ ಶೇ.೧೦೦ರಷ್ಟು ಫಲಿತಾಂಶ ಸಿಕ್ಕಿದೆ ಎಂದು ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಿ.ಎಸ್. ಆದ್ವಿ, (ರಾಜ್ಯಕ್ಕೆ ೩ನೇ ರ್ಯಾಂಕ್) ಕೆ.ಸಿ.ಪಂಚಮಿ( ರಾಜ್ಯಕ್ಕೆ ೪ನೇ ರ್ಯಾಂಕ್), ಕೆ.ಎಸ್. ತೇಜಸ್ವಿನಿ (ರಾಜ್ಯಕ್ಕೆ ೫ನೇ ರ್ಯಾಂಕ್) ಹಾಗು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಹಮ್ಮದ್ ಇಮ್ರಾನ್, ಎಸ್.ವೈ. ಹಿಮಾನಿ, ವೈ.ಎಸ್.ಧನ್ಯ, ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಕೆ.ಎಂ. ಸೃಷ್ಟಿ, ಎಂ.ಡಿ. ಖುಷಿ, ಡಿ.ಎಸ್.ಸ್ನೇಹ ಅವರುಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿಗಳಾದ ಕೆ.ಟಿ.ಬೆಳ್ಳಿಗೌಡ, ಮಂಜೂರು ತಮ್ಮಣಿ, ಸಂಘದ ಉಪಾಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಗೌರವ ಕಾರ್ಯದರ್ಶಿ ಎನ್.ಬಿ. ಗಣಪತಿ, ಖಜಾಂಚಿ ಜಿ.ಪಿ. ಲಿಂಗರಾಜು, ವಿದ್ಯಾಸಂಸ್ಥೆಯ ಭಾತ್ಮೀದಾರರಾದ ಕೆ.ಎಂ. ಜಗದೀಶ್, ಸಮುದಾಯಭವನ ಉಸ್ತುವಾರಿ ಕೆ.ಟಿ. ಪರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮತ್ತು ಸಂಘದ ನಿರ್ದೇಶಕರುಗಳು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಿಕಾ ಕುಮಾರ್, ನಗರ ಗೌಡ ಒಕ್ಕೂಟದ