ವೀರಾಜಪೇಟೆ, ಅ. ೨೪: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಗೊಂಡಿರುವ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಕಾರಣ ಮತ್ತು ಕೈಗೊಳ್ಳಬೇಕಿದ್ದ ಪೂರ್ವ ತಯಾರಿಯ ಕುರಿತು ಶಿಕ್ಷಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ವಿ. ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಕೆ.ಸಿ. ಗೀತಾಂಜಲಿ ಅವರು ಮಾತನಾಡಿ, ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಕಾರಣ ಮತ್ತು ಕೈಗೊಳ್ಳಬೇಕಿದ್ದ ಪೂರ್ವ ತಯಾರಿಯ ಕುರಿತು ವಿವರವಾಗಿ ಮಾಹಿತಿ ನೀಡಿದರು. ನಿವೃತ್ತಿಯ ಅಂಚಿನಲ್ಲಿರುವ, ಅನಾರೋಗ್ಯ ಪೀಡಿತರು ಹಾಗೂ ವಿಶೇಷಚೇತನ ಶಿಕ್ಷಕರನ್ನು ಕೂಡ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆದರೆ ಶಿಕ್ಷಕರ ಸಂಘಟನೆಯಲ್ಲಿರುವ ಕೆಲವೊಂದು ಯುವ ಶಿಕ್ಷಕರನ್ನು ಸಮೀಕ್ಷೆಯ ಕಾರ್ಯದಿಂದ ಕೈಬಿಡಲಾಗಿದೆ. ಕೆಲವು ಯುವ ಶಿಕ್ಷಕರನ್ನು ಸಮೀಕ್ಷೆಯ ಕಾರ್ಯಕ್ಕೆ ನಿಯೋಜಿಸದೆ ಮೀಸಲು ಪಟ್ಟಿಯಲ್ಲಿ ಇರಿಸಲಾಗಿರುವುದು ಸರಿಯಲ್ಲ. ಸಮೀಕ್ಷೆಯಲ್ಲಿ ಭಾಗವಹಿಸಿರುವ ಶಿಕ್ಷಕರಿಗೆ ಸೂಕ್ತ ತಾಂತ್ರಿಕ ತರಬೇತಿ ನೀಡಿಲ್ಲ. ಶಿಕ್ಷಕರು ಸಮಸ್ಯೆ ಕುರಿತು ಅಧಿಕಾರಿಗಳಿಗೆ ಕರೆ ಮಾಡಿದರೆ ಕೆಲ ಅಧಿಕಾರಿಗಳು ಕರೆ ಸ್ವೀಕರಿಸುತ್ತಿರಲಿಲ್ಲ. ಟಾರ್ಗೆಟ್ ನೀಡಿರುವುದು, ದೂರದ ಪ್ರದೇಶದಲ್ಲಿ ನಿಯೋಜಿಸಿರುವುದು, ಹಬ್ಬದ ದಿನಗಳಲ್ಲೂ ಬಿಡುವು ನೀಡದಿರುವುದು, ಅವೈಜ್ಞಾನಿಕ ಮ್ಯಾಪಿಂಗ್ ಸಮಸ್ಯೆಯಿಂದಾಗಿ ಶಿಕ್ಷಕರು ಸಮಸ್ಯೆ ಅನುಭವಿಸುವಂತಾಗಿದೆ. ಜೊತೆಗೆ ಸಮಸ್ಯೆಗೆ ಕಾರಣವಾಗಿರುವ ಅಂಶಗಳು ಹಾಗೂ ಪರಿಹಾರದ ಕುರಿತು ಮನವಿಯಲ್ಲಿ ವಿವರಿಸಲಾಗಿದೆ.
ಈ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಮುಂದಿನ ಗಣತಿ ಅಥವಾ ಸಮೀಕ್ಷೆಯ ಕಾರ್ಯದಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳು ಶಿಕ್ಷಕರಿಗೆ ಉಂಟಾಗದAತೆ ಸಂಬAಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೆðಶನ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ್ದ ವಿವಿಧೆಡೆಯ ಶಿಕ್ಷಕರು ಹಾಜರಿದ್ದರು.