ಶ್ರೀಮಂಗಲ, ಅ. ೨೪: ನಮ್ಮ ಪೂರ್ವಜರು ಯಾವುದೇ ಸೌಕರ್ಯವಿಲ್ಲದೆ ಅತೀ ಕಷ್ಟದ ಜೀವಮಾನ ನಡೆಸುತ್ತಿದ್ದ ಕಾಲದಲ್ಲಿಯೇ ಕೊಡವರು ಎಂಟು ಹತ್ತು ಮಕ್ಕಳನ್ನು ಹೆತ್ತು, ಸಾಕಿ ಒಳ್ಳೆಯ ಬದುಕು ಕಟ್ಟಿಕೊಟ್ಟಿದ್ದಾರೆ. ಆದರೆ ಇಂದು ಎಲ್ಲಾ ಸೌಕರ್ಯಗಳಿದ್ದರೂ ಸಾಕಲು ಸಾಧ್ಯವಿಲ್ಲವೆಂಬ ಸುಳ್ಳು ನೆಪ ಹೇಳುತ್ತಾ ದಂಪತಿಗಳು ಒಂದು ಮಗುವಿಗೆ ಸೀಮಿತಗೊಳಿಸುತ್ತಿರುವುದು ಕೊಡವರ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅಲ್ಲವೆಂದು ಬಾದುಮಂಡ ಚಿಮ್ಮ ಉತ್ತಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ೯ನೆ ವರ್ಷದ ಚಂಗ್ರಾAದಿ ಪತ್ತಲೋದಿ ೬ನೆ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಷ್ಟೂ ನಮ್ಮ ಸಂಸ್ಕ್ರತಿ ಬಲಗೂಡುತ್ತದೆ. ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಪಡೆದುಕೊಳ್ಳಲು ಸಹಕಾರವಾಗುತ್ತದೆ. ನಮ್ಮ ಜನಾಂಗದ ಮುಂದಿನ ಭವಿಷ್ಯವನ್ನು ಮನಸಿನಲ್ಲಿಟ್ಟುಕೊಂಡು ಮಕ್ಕಳ ಸಂಖ್ಯೆಯನ್ನು ವೃದ್ಧಿಸಲು ಮನಸ್ಸು ಮಾಡಬೇಕೆಂದರು.

ಮತ್ತೋರ್ವ ಅತಿಥಿ ಮುಕ್ಕಾಟಿರ ವಾಣಿ ವಾಸು ಮಾತನಾಡಿ, ಚಂಗ್ರಾAದಿ ಪತ್ತಲೋದಿಯ ಹೆಸರಿನಲ್ಲಿ ಆರಂಭಿಸಿದ ಈ ಸಾಂಸ್ಕೃತಿಕ ವೇದಿಕೆಯನ್ನ ಎಲ್ಲರೂ ಉತ್ತಮವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಬೇಕು. ಕೊಡವ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಪೋಷಕರು ಮಕ್ಕಳೊಂದಿಗೆ ಕೊಡವ ಭಾಷೆಯಲ್ಲೇ ಮಾತನಾಡಬೇಕೆಂದರು.

ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಹಾಗೂ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಕೊಡವ ಸಮಾಜ ಕೊಡವ ಜನಾಂಗ ಹಾಗೂ ಸಂಸ್ಕ್ರತಿಯ ಬೆಳವಣಿಗೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಸಭೆಗೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ ಚೆಟ್ಟಂಗಡ ಗಿಣಿ ಕಾರ್ಯಪ್ಪ ಪತ್ತಲೋದಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭ ದಾನಿಗಳಾದ ಬಾದುಮಂಡ ಚಿಮ್ಮ ಉತ್ತಯ್ಯ ಅವರನ್ನು ಟಿ.ಶೆಟ್ಟಿಗೇರಿ ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಚೆಟ್ಟಂಗಡ ಕುಟುಂಬದ ಮಹಿಳೆಯರ “ಬದ್‌ಕ್‌ರ ಪಾಟ” ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನ ಹಾಗೂ ಆಂಗೋಡ್ ಕೇರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.