ಸೋಮವಾರಪೇಟೆ, ಸೆ. ೧೭: ಇಲ್ಲಿನ ಶ್ರೀ ನಾರಾಯಣ ಗುರು ಸೇವಾ ಸಮಿತಿ, ತುಳುನಾಡು ಬಿಲ್ಲವ ಮಹಿಳಾ ಸಂಘ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಮಾನಸ ಸಭಾಂಗಣದಲ್ಲಿ ೧೦ನೇ ವರ್ಷದ ಆಟಿ ಸಂಭ್ರಮೋತ್ಸವ, ಕ್ರೀಡಾಕೂಟ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಯಾವ ಮಕ್ಕಳೂ ಸಹ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬುದು ನಾರಾಯಣ ಗುರುಗಳ ತತ್ವ ಸಿದ್ದಾಂತ, ಅವರ ತತ್ವ ಸಿದ್ದಾಂತಗಳನ್ನು ನಾವೆಲ್ಲರೂ ಪಾಲಿಸಬೇಕು. ನಾವು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ ಎಂದರೆ ವಿದ್ಯೆ ಮಾತ್ರ ಎಂದರು.
ಈಗಾಗಲೇ ಸೋಮವಾರಪೇಟೆ ಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ನಿವೇಶನ ಖರೀದಿ ಮಾಡಿದ್ದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ೫ ಲಕ್ಷ ಅನುದಾನ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತಹAತವಾಗಿ ಅನುದಾನ ನೀಡಲಾಗುವುದು. ಮುಂದಿನ ವರ್ಷ ಸ್ವಂತ ಕಟ್ಟಡದಲ್ಲಿ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಆಶಿಸಿದರು.
ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ತತ್ವ ಸಿದ್ದಾಂತಗಳನ್ನು ನಾವು ಪಾಲಿಸಬೇಕು. ವಿದ್ಯೆಯಿಂದ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ಸಂಘಟನೆಯನ್ನು ಬಲಪಡಿಸಲು ಎಲ್ಲರ ಸಹಕಾರ ಅತ್ಯವಶ್ಯಕ. ಇಂದು ನಾರಾಯಣ ಗುರು ಸೇವಾ ಸಮಿತಿಯ ಅನೇಕರು ಉನ್ನತ ಸಾಧನೆ ಮಾಡುತ್ತಿದ್ದಾರೆ; ಇವರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.
ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಸರ್ವ ಜನಾಂಗವು ಒಂದೇ ಜಾತಿ ಮತ ಭೇದಗಳೆಂದು ಕಚ್ಚಾಡಬಾರದು. ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯಲು ನಾವು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಘಟನೆಯ ಕೊರತೆಯೇ ಕಾರಣ. ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬೇರೆ ಬೇರೆ ಸಂಘಟನೆಗಳಿದ್ದರೂ ಎಲ್ಲಾ ಸಂಘಟನೆಗಳ ತತ್ವ ಸಿದ್ಧಾಂತ ಒಂದೇ ಆಗಿದೆ. ಈ ಹಿನ್ನೆಲೆ ಎಲ್ಲರೂ ಒಂದಾಗಿ ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಿದೆ ಎಂದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ನಾವೆಲ್ಲರೂ ಒಂದೇ ಜಾತಿ ಮತ ದವರು ಎಂದು ವಿಶ್ವಕ್ಕೆ ಸಾರಿದವರು ಶ್ರೀ ನಾರಾಯಣ ಗುರುಗಳು. ಅವರ ಮಾರ್ಗದರ್ಶನದಂತೆ ಸಮಾಜ ಮುನ್ನಡೆಯಬೇಕು. ಸೋಮವಾರಪೇಟೆ ಸಂಘದಿAದ ಆಟಿ ಸಂಭ್ರಮ, ಕ್ರೀಡಾಕೂಟ ಹಾಗೂ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೊಡಗು ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಪ್ರವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷರಾದ ಬಿ. ಆರ್. ಚಂದ್ರಹಾಸ ವಹಿಸಿದ್ದರು.
ಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವ ಸಲಹೆಗಾರ ಬಿ.ಎ. ಭಾಸ್ಕರ್, ಉದ್ಯಮಿಗಳಾದ ಬಿ.ಎಸ್. ಸುಂದರ್, ಬಿ.ಎಸ್. ಶ್ರೀಧರ್, ಕಾರ್ತಿಕ್ ಸದಾನಂದ್, ತುಳುನಾಡ ಬಿಲ್ಲವ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಬೇಬಿ ಚಂದ್ರಹಾಸ, ಮೂಡಬಿದ್ರೆ ಆಳ್ವಾಸ್ ಕಾಲೇಜು ಉಪನ್ಯಾಸಕರಾದ ತೇಜಸ್, ಮೋಹನ್, ಕುಶಾಲನಗರ ತಾಲೂಕು ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ ಅಧ್ಯಕ್ಷ ಸುಧೀರ್, ಸುಂಟಿಕೊಪ್ಪ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಮಣಿ ಮುಖೇಶ್, ನಾಪೋಕ್ಲು ಬಿಲ್ಲವ ಸಂಘದ ಅಧ್ಯಕ್ಷ ಪ್ರದೀಪ್, ಸೋಮವಾರಪೇಟೆ ನಾರಾಯಣ ಗುರು ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ಇಂದಿರಾ ಮೋಣಪ್ಪ ಮುಂತಾದವರಿದ್ದರು. ವಿಶ್ವ ಕುಂಬೂರು ಹಾಗೂ ದಿನೇಶ್ ಮಾಲಂಬಿ ಕಾರ್ಯಕ್ರಮ ನಿರ್ವಹಿಸಿದರು.
ಆಟಿ ಸಂಭ್ರಮೋತ್ಸವ ಅಂಗವಾಗಿ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟ ನಡೆಯಿತು.
ಕೃಷಿ ಸಂಶೋಧನಾ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ ೩೪ನೇ ರ್ಯಾಂಕ್ ಪಡೆದ ಬಿ.ಎಂ. ಸೃಜನ್ ಸೇರಿದಂತೆ ಶೈಕ್ಷಣಿಕ ಸಾಧನೆ ಮಾಡಿದ ಜನಾಂಗದ ವಿದ್ಯಾರ್ಥಿಗಳನ್ನು ಹಾಗೂ ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಸಾಧನೆ ಮಾಡಿದ ನಾರಾಯಣ ಗುರು ಸೇವಾ ಸಮಿತಿ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.