ಮಡಿಕೇರಿ, ಸೆ. ೧೪: ಶಾಲಾ ಹಂತದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅತ್ಯಗತ್ಯ ಎಂದು ಕೂಡಿಗೆ ಡಯಟ್ ಪ್ರಾಂಶುಪಾಲರಾದ ಡಿ.ಉದಯ ಕುಮಾರ್ ಅವರು ಹೇಳಿದರು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಲೋಕ ಶಿಕ್ಷಣ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ನಗರದ ಜೂನಿಯರ್ ಕಾಲೇಜು ಆವರಣದ ಸಭಾಭವನದಲ್ಲಿ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾಗರಿಕ ಪ್ರಪಂಚಗಳ ಮೂಲಕ ಸಾಕ್ಷರತೆ ಬೆಳವಣಿಗೆ ಆಗಿದೆ. ಶಿಕ್ಷಣ ಎಂಬುದು ಮನುಷ್ಯರ ಒಂದು ಅಕ್ಷರ ಜ್ಞಾನ, ಸಾಕ್ಷರತೆಯನ್ನು ವಸ್ತುನಿಷ್ಠೆಯಿಂದ ನೋಡಬೇಕು ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರಾದ ವಿಜಯ್ ಅವರು ಮಾತನಾಡಿ, ಸಾಕ್ಷರತೆಯು ತಂತ್ರಜ್ಞಾನಗಳಲ್ಲಿ ಮುಂದುವರೆಯುವ ಒಂದು ರಾಷ್ಟ್ರವಾಗಿದೆ ಹಾಗೂ ಕಾಲೇಜುಗಳಿಗೆ ಆಗಮಿಸುವುದು ಪುಣ್ಯದ ಕೆಲಸ ಎಂದರು.

ಶಿಕ್ಷಣಾಧಿಕಾರಿ ಮಹೇಶ್ ಅವರು ಮಾತನಾಡಿ, ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಿದೆ ಎಂದರೆ ಅದು ಸಾಕ್ಷರತೆ ಇದ್ದರೆ ಮಾತ್ರ ಎಂದು ಹೇಳಿದರು.

ಕೂಡಿಗೆ ಡಯಟ್ ಪ್ರಾಂಶುಪಾಲರಾದ ಡಿ.ಉದಯಕುಮಾರ್ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಅವರು ಮಾತನಾಡಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್ ಹೇಮಂತ ರಾಜ್ ಸ್ವಾಗತಿಸಿದರು. ಯಮುನಾ ನಿರೂಪಿಸಿ, ವಂದಿಸಿದರು. ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪ್ರೌಢಶಾಲಾ ವಿಭಾಗದಿಂದ ನಾಟಕ ಪ್ರದರ್ಶನ ಜರುಗಿತು.

ಶಿಕ್ಷಣಾಧಿಕಾರಿ ಮಹೇಶ್, ಹಿರಿಯ ಉಪನ್ಯಾಸಕರಾದ ಸತೀಶ್, ಉಪನ್ಯಾಸಕರಾದ ಗೀತಾ, ಮಲ್ಲೇಶ್, ಸೌಮ್ಯ, ಡಯಟ್ ನೋಡೆಲ್ ಅಧಿಕಾರಿಗಳು, ಹಿರಿಯ ಉಪನ್ಯಾಸಕರು ಮತ್ತು ಸಿಬ್ಬಂದಿಯವರು ಇದ್ದರು.