ಕುಶಾಲನಗರ, ಜೂ. ೨೫: ಸಿಕಲ್‌ಸೆಲ್ (ಕುಡುಗೋಲು) ಅನುವಂಶೀಯ ಕಾಯಿಲೆ ಯಾಗಿದ್ದು, ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚುವ ಹಾಗೂ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಜೀವವನ್ನು ಉಳಿಸಬಹುದು ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಸುಧಾರಿಸಬಹುದು ಎಂದು ಕುಶಾಲನಗರ ತಾಲೂಕು ಆರೋಗ್ಯಾಧಿಕಾರಿ ಡಾ ಇಂದೂಧರ್ ಹೇಳಿದರು.

ಕುಶಾಲನಗರ ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪಿಎಂ ಜನ್ ಮನ್ ಕಾರ್ಯಕ್ರಮ: ೨೦೨೫ ರಡಿ ತಾಲೂಕಿನ ನಂಜರಾಯಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿಶ್ವ ಸಿಕಲ್ ಸೆಲ್ ದಿನಾಚರಣೆ ಅಂಗವಾಗಿ ಸಿಕಲ್ ಸೆಲ್ ಕಾಯಿಲೆ ಕುರಿತು ಏರ್ಪಡಿಸಿದ್ದ ಆರೋಗ್ಯ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದಿವಾಸಿ ಸಮುದಾಯದವರಲ್ಲಿ ಹೆಚ್ಚಾಗಿ ಕಂಡುಬರುವ ಸಿಕಲ್ ಸೆಲ್ (ಕುಡುಗೋಲು) ಕಾಯಿಲೆಯನ್ನು ೨೦೪೭ ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾಯಿಲೆಯ ನಿರ್ಮೂಲನೆಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದರು.

ಸಿಕಲ್ ಸೆಲ್ ಕಾಯಿಲೆಯು ಆದಿವಾಸಿಗಳಲ್ಲಿ ಕಂಡುಬರುವ ಅನುವಂಶೀಯ ಕಾಯಿಲೆಯಾಗಿದ್ದು, ಆಶ್ರಮ ಶಾಲೆಯ ಮಕ್ಕಳಿಗೆ ಹಾಗೂ ನೆರೆದಿದ್ದ ಬುಡಕಟ್ಟು ಜನಾಂಗದವರಿಗೂ ಸಿಕಲ್‌ಸೆಲ್ ಕಾಯಿಲೆಯಿಂದ ಕಂಡುಬರುವ ರಕ್ತಹಿನತೆಯ ಬಗ್ಗೆ ಹಾಗೂ ಅದಕ್ಕೆ ದೊರಕುವ ಸೌಲಭ್ಯಗಳ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾ ಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿ ಕಾರಿಗಳಾದ ವಿಶ್ವಜ್ಞಾ, ಜನಾರ್ಧನ್ ರಾವ್, ಕದಂ, ಪ್ರೇಮ್ ಹಾಗೂ ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿ ಕಾರಿಗಳಾದ ಪ್ರಿಯಾ, ಪ್ರೇಮಾ, ಹರ್ಷಿತಾ, ರಾಕೇಶ್, ಐಟಿಡಿಪಿ ಯೋಜನೆಯ ಚಂದನ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.