ಮಡಿಕೇರಿ, ಜೂ. ೨೪: ಹಲವು ವರ್ಷಗಳಿಂದ ಬಿಲ್ಲವ ಸಮಾಜದವರ ಏಳಿಗೆಗಾಗಿ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಸಮಾಜ ಬಾಂಧವರು ಸಂಘಟನೆಯ ಮೂಲಕ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಗಣ್ಯರು ಕರೆ ನೀಡಿದರು.
ಸಿದ್ದಾಪುರದ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ಬಿಲ್ಲವ ಸಮಾಜದ ಅಮ್ಮತ್ತಿ, ಸಿದ್ದಾಪುರ, ನೆಲ್ಲಿಹುದಿಕೇರಿ ಹೋಬಳಿಮಟ್ಟದ ಸಭೆ ನಡೆಯಿತು.
ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಲಿಂಗಪ್ಪ ಪೂಜಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ಸಮಾಜ ಬಾಂಧವರು ಸಂಘಟನೆಯ ಮೂಲಕ ಶಕ್ತರಾಗಿ ಅಭಿವೃದ್ಧಿಯೊಂದಿಗೆ ಮುನ್ನಡೆದಲ್ಲಿ ಆರ್ಥಿಕವಾಗಿ ಸ್ವಾವಲಂಬನೆಯ ಜೀವನ ನಡೆಸಲು ಸಾಧ್ಯವಾಗಲಿದೆ.
ಮುಂದಿನ ದಿನಗಳಲ್ಲಿ ಮಡಿಕೇರಿಯಲ್ಲಿ ಗುರು ಜಯಂತಿಯನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು. ಇದೇ ಸಂದರ್ಭ ಸಿದ್ದಾಪುರ ಹೋಬಳಿ ಮಟ್ಟದ ಬಿಲ್ಲವ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಬಿ.ವಿ. ರಂಜನ್ (ರಘು) ಕಾರ್ಯದರ್ಶಿಯಾಗಿ ಬಿ.ಎಸ್. ಸುರೇಶ್, ಖಜಾಂಚಿಯಾಗಿ ಬಿ.ಎಸ್. ಸುಜಾತ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್. ಜನಾರ್ದನ, ಪೃಥ್ವಿ ಬಿ.ಎಂ., ಮುತ್ತಪ್ಪ. ಬಿ.ಡಿ. ಹಾಗೂ ಸಂತೋಷ್. ಬಿ.ಕೆ. ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಆನಂದ ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕರ್ಕೇರ, ಜಿಲ್ಲಾ ಉಪಾಧ್ಯಕ್ಷರುಗಳಾದ ಗಣೇಶ್ ಬಿ.ಎಂ. ಸುಧೀರ್, ಜಿಲ್ಲಾ ಖಜಾಂಚಿ ಮಣಿ ಮುಖೇಶ್, ಸಂಘಟನಾ ಕಾರ್ಯದರ್ಶಿಗಳಾದ ಸುರೇಶ್ ಬಿ.ಜೆ, ಚಂದ್ರಶೇಖರ ಬಿ.ಡಿ. ಸಹ ಕಾರ್ಯದರ್ಶಿಗಳಾದ ಅಶೋಕ ಪೂಜಾರಿ, ಆಶಾ ಅಣ್ಣಪ್ಪ ಉಪಸ್ಥಿತರಿದ್ದರು.