ಚೆಯ್ಯಂಡಾಣೆ, ಜೂ. ೧೪: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಮನೋರಂಜನೆಗಾಗಿ ಆಗಮಿಸುತ್ತಾರೆ. ಹೀಗೆ ಬರುವಾಗ ತಮ್ಮ ಜೊತೆ ಕಸ ಸಹ ತರುತ್ತಾರೆ. ಈ ಕಸಗಳು ಪ್ರವಾಸಿ ತಾಣದ ಸೌಂದರ್ಯವನ್ನೇ ಹಾಳು ಮಾಡುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇದರಲ್ಲಿ ಚೆಯ್ಯಂಡಾಣೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಮನಮೋಹಕ ಚೇಲಾವರ ಜಲಪಾತ, ಪ್ರಕೃತಿ ರಮಣೀಯ ಕಬ್ಬೆ ಬೆಟ್ಟ ಕೂಡ ಒಂದು.
ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಭೇಟಿ ಹೆಚ್ಚಾಗಿ ಇದ್ದೇ ಇರುತ್ತದೆ. ಈ ಕಸಗಳು ಪ್ರವಾಸಿ ತಾಣದ ಸೌಂದರ್ಯವನ್ನೇ ಹಾಳುಮಾಡುತ್ತದೆ ಎಂಬುದರಲ್ಲಿ ತಪ್ಪಿಲ್ಲ ಹಾಗೂ ಪ್ಲಾಸ್ಟಿಕ್ ಹಾವಳಿ ಹೆಚ್ಚು, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಜೊತೆ ಅಂಗಡಿಗಳಲ್ಲಿ ಸಿಗುವ ಚಿಪ್ಸ್, ಜ್ಯೂಸ್ ಬಾಟಲಿ, ನೀರಿನ ಬಾಟಲಿಗಳನ್ನು ತರುತ್ತಾರೆ. ಕೆಲ ಹೊತ್ತು ಪ್ರವಾಸಿ ತಾಣದಲ್ಲಿ ಕುಳಿತು ಅಲ್ಲಿನ ವಿಶೇಷತೆಯನ್ನು ಗಮನಿಸಿ, ಮೋಜು ಮಸ್ತಿ ಮಾಡಿ ತಾವು ತಂದ ತಿಂಡಿ ತಿನಿಸುಗಳ ಪ್ಯಾಕೆಟ್ಗಳನ್ನು ಅಲ್ಲಿಯೇ ಬಿಟ್ಟು ತೆರಳುತ್ತಾರೆ, ಎಲ್ಲಾ ಪ್ರವಾಸಿ ತಾಣದಲ್ಲಿ ಕಸವನ್ನು ಹಾಕಲು ಒಂದು ಜಾಗವನ್ನು ನಿಗದಿ ಮಾಡಲಾಗಿರುತ್ತದೆ. ಇದನ್ನು ಮರೆತ ಪ್ರವಾಸಿಗರು ತಾವು ಇದ್ದ ಜಾಗದಲ್ಲೇ ಕಸವನ್ನು ಹಾಕಿ ಹೊರಟುಬಿಡುತ್ತಾರೆ. ಇದರಿಂದ ಪ್ರವಾಸಿ ತಾಣಗಳು ಕಸದ ರಾಶಿಯಾಗಿ ಮಾರ್ಪಾಡಾಗುತ್ತಿವೆ.
ಕಸದ ರಾಶಿಗೆ ಇಲ್ಲಿನ ಕಬ್ಬೆಬೆಟ್ಟ ಉದಾಹರಣೆ!
ಕೊಡಗು ಜಿಲ್ಲೆಯ ಚೇಲಾವರ ಜಲಪಾತ, ಕಬ್ಬೆಬೆಟ್ಟ ಸ್ಥಳೀಯ ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷö್ಯದಿಂದಾಗಿ ಇಲ್ಲಿ ಸ್ವಚ್ಛತೆಯೇ ಮಾಯವಾಗಿದೆ. ಇಲ್ಲಿ ಕಸದ ರಾಶಿ ತುಂಬಿ ಹೋಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿಗರು ಸಹ ಬಾರದ ಪರಿಸ್ಥಿತಿ ಇದೆ. ಇಲ್ಲಿ ಕಸದ ಜೊತೆಗೆ ಮದ್ಯದ ಬಾಟಲಿಗಳು ಇವೆ. ಈ ಬಗ್ಗೆ ಸ್ಥಳೀಯರು ಸಂಬAಧ ಪಟ್ಟ ಇಲಾಖೆಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನ ಇಲ್ಲ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು.
ರಾತ್ರಿ ವೇಳೆ ಚೇಲಾವರ ಜಲಪಾತ ಹಾಗೂ ಕಬ್ಬೆ ಬೆಟ್ಟದಲ್ಲಿ ಅಪ್ರಾಪ್ತರು ಹೆಚ್ಚಾಗಿ ಸುಳಿದಾಡುತ್ತಿರುತ್ತಾರೆ. ರಾತ್ರಿ ವೇಳೆ ಇಲ್ಲಿಗೆ ನಿರ್ಬಂಧ ವಿಧಿಸಬೇಕು, ಅನಾಹುತ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು, ರಾತ್ರಿ ವೇಳೆ ಸುಳಿದಾಡುವವರಿಗೆ ಪೊಲೀಸ್ ಇಲಾಖೆ ದಂಡ ವಿಧಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಂಘಗಳಿAದ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ..!
ಚೇಲಾವರ ಗ್ರಾಮದ ಸಂಜೀವಿನಿ ಒಕ್ಕೂಟ, ಸ್ಥಳೀಯ ಸ್ವಸಹಾಯ ಸಂಘ, ಯುವಕ ಸಂಘಗಳು ಹಲವಾರು ಬಾರಿ ಸ್ವಚ್ಛತೆ ಮಾಡಿದರೂ ಪುನಃ ಪುನಃ ಕಸದ ರಾಶಿಯಾಗಿ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟ ಮಾರ್ಪಟ್ಟಿದೆ.
ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಪ್ರಕೃತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪ್ರವಾಸಿ ತಾಣದಲ್ಲಿ ಸ್ವಚ್ಛತೆ ಕಾಪಾಡಲು ಅಲ್ಲಲ್ಲಿ ಸ್ವಚ್ಛತೆಯ ನಾಮಫಲಕ ಅಳವಡಿಸಬೇಕು. ಪ್ರವಾಸಿಗರು ಕಸವನ್ನು ಕಂಡಕAಡಲ್ಲಿ ಹಾಕಿದರೆ ದಂಡ ವಿಧಿಸಬೇಕು, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು.
ಈ ರೀತಿ ಪ್ರವಾಸಿಗರಿಗೆ ಅರಿವು ಬಂದ್ರೆ, ಎಲ್ಲಾ ಪ್ರವಾಸಿ ತಾಣಗಳು ಸ್ವಚ್ಛತೆಯಿಂದ ನಳನಳಿಸಿ ಸುಂದರವಾಗಿರುತ್ತೆ. ಈ ಬಗ್ಗೆ ಜಾಗೃತಿ ಅಗತ್ಯವಿದೆ.
- ಅಶ್ರಫ್
ಚೇಲಾವರ ಜಲಪಾತ ಹಾಗೂ ಕಬ್ಬೆ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ತಪಾಸಣಾ ಗೇಟ್ ಅಳವಡಿಸಿ ತಪಾಸಣೆ ನಡೆಸಿ ಶುಲ್ಕ ವಸೂಲಾತಿ ಮಾಡಲಾಗುತ್ತಿತ್ತು. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕಳೆದ ಕೆಲವು ವರ್ಷಗಳಿಂದ ಗೇಟ್ ತೆರವು ಗೊಳಿಸಿದ್ದೇವೆ. ಆದಷ್ಟು ಶೀಘ್ರ ಅರಣ್ಯ ಇಲಾಖೆ, ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಕರೆದು ತಪಾಸಣಾ ಗೇಟ್ ಅಳವಡಿಸಲಾಗುವುದು.
-ಪೆಮ್ಮಂಡ ಕೌಶಿ ಕಾವೇರಮ್ಮ, ಅಧ್ಯಕ್ಷೆ ನರಿಯಂದಡ ಗ್ರಾ.ಪಂ.
ಇಲ್ಲಿನ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಾಗಿ ರಾತ್ರಿ ವೇಳೆ ಆಗಮಿಸುತ್ತಾರೆ, ಕುಡಿದು ಮೋಜು ಮಸ್ತಿ ಮಾಡಿ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಾರೆ, ತಂದ ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲೇ ಬಿಸಾಡಿ ತೆರಳುತ್ತಾರೆ, ಹಲವಾರು ಬಾರಿ ಗ್ರಾಮಸ್ಥರೇ ಇದನ್ನು ಸ್ವಚ್ಛಗೊಳಿಸಿದ್ದಾರೆ. ಪೊಲೀಸರು ನಿಗಾವಹಿಸಿ ರಾತ್ರಿ ವೇಳೆ ಪ್ರವಾಸಿಗರಿಗೆ ಕಬ್ಬೆಬೆಟ್ಟ ಹಾಗೂ ಜಲಪಾತಕ್ಕೆ ತೆರಳಲು ಕಡಿವಾಣ ಹಾಕಬೇಕು.
-ದಿಲೀಪ್ (ಅನು), ಚೇಲಾವರ ಗ್ರಾಮಸ್ಥ
ರಾತ್ರಿ ವೇಳೆ ಜಲಪಾತ ಹಾಗೂ ಕಬ್ಬೆಬೆಟ್ಟಗಳಲ್ಲಿ ಅಪ್ರಾಪ್ತರು ಹಾಗೂ ಪ್ರವಾಸಿಗರನ್ನು ಕಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಠಾಣೆಯಲ್ಲಿ ಸಿಬ್ಬಂದಿಗಳ ಕೊರೆತೆ ಇದೆ, ಈಗಾಗಲೇ ರಜೆ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ.
- ಮಂಜುನಾಥ್, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ