ಗೋಣಿಕೊಪ್ಪಲು, ಜೂ. ೪: ನಗರದಲ್ಲಿ ಹಲವು ಸಮಯದಿಂದ ಟನ್ಗಟ್ಟಲೆ ಸಂಗ್ರಹವಾಗಿದ್ದ ಒಣ ಕಸವನ್ನು ವಿಲೇವಾರಿ ಮಾಡುವಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಯಶಸ್ವಿಯಾಗಿದೆ. ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ಶಾಸಕ ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯು ಒಣ ಕಸವನ್ನು ಸಂಗ್ರಹಿಸಿ ಇಟ್ಟಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಕ್ರಮಕ್ಕೆ ಸೂಚಿಸಿದ್ದರು.
ನಗರದಲ್ಲಿ ಸಂಗ್ರಹಿಸಲಾಗುತ್ತಿದ್ದ ಕಸಗಳನ್ನು ವಿಂಗಡಿಸಿ ಪಂಚಾಯಿತಿ ಸಮೀಪದ ಹಿಂಭಾಗದ ಸರ್ಕಾರಿ ಕೊಠಡಿಯಲ್ಲಿ ಸಂಗ್ರಹ ಮಾಡಲಾಗಿತ್ತು. ಸಂಗ್ರಹಿಸಲಾಗಿದ್ದ ಕಸವನ್ನು ಬೇರೆಡೆಗೆ ಸಾಗಾಟ ಮಾಡುವಲ್ಲಿ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಂಗ್ರಹವಾಗುತ್ತಿದ್ದ ಕಸವು ಹೆಚ್ಚಾಗುತ್ತಲೇ ಇದ್ದವು. ಇದರಿಂದ ಸಹಜವಾಗಿ ಕಟ್ಟಡದ ಸುತ್ತಮುತ್ತಲಿನ ಕಚೇರಿಗಳಿಗೆ ತೊಂದರೆಯಾಗುತ್ತಿತ್ತು.
ಶಾಸಕ ಪೊನ್ನಣ್ಣನವರು ಕಸ ಸಂಗ್ರಹಣೆಯ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಶಾಸಕರ ಸೂಚನೆ ಅನ್ವಯ ಕಾರ್ಯಪ್ರವೃತ್ತರಾದ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಅಣ್ಣೀರ ಹರೀಶ್ ಪೌರ ಕಾರ್ಮಿಕರ ಸಹಾಯದಿಂದ ಸಂಗ್ರಹವಾಗಿದ್ದ ಒಣ ಕಸವನ್ನು ಸೀತಾ ಕಾಲೋನಿಯಲ್ಲಿರುವ ಕಸ ವಿಂಗಡಣೆಯ ಘಟಕಕ್ಕೆ ಸಾಗಾಟ ಮಾಡಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯರಾದ ಕೋಳೆರ ಭಾರತಿ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.